ಬೆಳ್ತಂಗಡಿ: ಶಿಕ್ಷಣದಲ್ಲಿ ಭಾರತೀಯತೆಯನ್ನು ತಂದು ಹಿತವಾದ ಸಮಾಜದ ನಿರ್ಮಾಣ ಆಗಬೇಕು ಎಂಬ ಉದ್ದೇಶದಿಂದ ಗೋಕರ್ಣದ ಸನಿಹ ಅಶೋಕೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಸ್ಥಾಪಿತಗೊಂಡು ಶಿಕ್ಷಣ ನೀಡುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅವರು, ಸೋಮವಾರ ಗರ್ಡಾಡಿ ಶಿವಪ್ರಸಾದ ಎಂಬುವರ ನಿವಾಸದಲ್ಲಿ ವಿ.ವಿ.ವಿ. ಕುರಿತ ಸಂವಾದ ನಡೆಸಿ ಉದ್ದೇಶ, ಪರಿಕಲ್ಪನೆಗಳನ್ನು ವಿವರಿಸಿದರು.
ಧರ್ಮ ಚಕ್ರ ಟ್ರಸ್ಟ್ ನಿರ್ವಹಿಸುತ್ತಿರುವ ವಿದ್ಯಾಪೀಠಮ್ನಲ್ಲಿ ಪ್ರಸ್ತುತ ಆಧುನಿಕ ಪಠ್ಯಕ್ರಮಗಳು ಇವೆಯಲ್ಲದೆ ಸಂಸ್ಕೃತ, ವೇದಪಥ, ಯೋಗ, ಜ್ಯೌತಿಷ, ವಾಸ್ತು ಮೊದಲಾದ 64 ಕಲೆಗಳ ಶಿಕ್ಷಣ, ಭಾರತೀಯವಾದ 18 ವಿದ್ಯಾಸ್ಥಾನಗಳ ಪರಿಚಯವನ್ನೂ ಮಾಡಿಕೊಡಲಾಗುತ್ತದೆ. ಭಾರತೀಯ ವಿದ್ಯೆ, ಕಲೆ, ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಿ, ಮುಂದಿನ ಪೀಳಿಗೆಯಲ್ಲಿ ದೈವಭಕ್ತಿ, ಗುರುನಿಷ್ಠೆ, ದೇಶಪ್ರೇಮ, ಸ್ವಾವಲಂಬನೆ, ಸ್ವರಕ್ಷಣೆ, ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಿ, ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡುವ ಗುರಿಯನ್ನು ಇಟ್ಟು ಕೊಳ್ಳಲಾಗಿದೆ ಎಂದರು.
ಋಷಿಯುಗ ಹಾಗೂ ನವಯುಗದ ಮತ್ತು ಸನಾತನದೊಂದಿಗೆ ವಿನೂತನ ಶಿಕ್ಷಣದ ಸೌಲಭ್ಯ ಇಲ್ಲಿದೆ ಎಂದ ಅವರು ಶಿಕ್ಷಣ ಲೋಕಹಿತವಾಗಿರಬೇಕೇ ಹೊರತು ಲೋಕಕಂಟಕವಾಗಿರಬಾರದು. ಸಮಾಜವನ್ನು ಕಟ್ಟುವಂತಹದ್ದಾಗಿರಬೇಕಲ್ಲದೆ, ವಿದ್ಯೆಯೊಂದಿಗೆ ನಿಷ್ಠೆ ಹೊಂದುವಂತಿರಬೇಕು ಎಂಬ ಅನನ್ಯತೆಯ ವಿ.ವಿ.ವಿ.ಇದಾಗಿದೆ ಎಂದರು.
ವಿದ್ಯಾಪೀಠದಲ್ಲಿ ಯಾವುದೇ ಜಾತಿ, ಮತ ಹಾಗೂ ಪಂಥಗಳ ಭೇದವಿಲ್ಲದೆ ಸರ್ವಸಮಾಜದ ಜನರು ಎಲ್ಲಾ ಪ್ರಯೋಜನಗಳನ್ನು ಪಡೆಯಲು ಅರ್ಹರು. ಶಿಶುವಿಹಾರದಿಂದ ಪಿ.ಎಚ್ಡಿ ವ್ಯಾಸಂಗದ ವ್ಯವಸ್ಥೆ ಇದೆ. ಸುಮಾರು 100 ಕೋಟಿ ರೂ. ಅಧಿಕ ವೆಚ್ಚದಲ್ಲಿ ನಿರ್ಮಿತವಾಗುತ್ತಿರುವ ವಿದ್ಯಾಪೀಠದ 4 ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳ ವಾಸ- ವಿದ್ಯಾಭ್ಯಾಸ ನಡೆಸಲಾಗುತ್ತಿದೆ ಎಂದ ಶ್ರೀಗಳು ವಿದ್ಯಾಪೀಠಕ್ಕೆ ಮಕ್ಕಳನ್ನು ಕಳುಹಿಸುವುದರ ಜೊತೆಗೆ ಇಲ್ಲಿನ ಶಿಕ್ಷಣದ ಬಗ್ಗೆ ನಾಡಿನ ಮೂಲೆ ಮೂಲೆಗಳಿಗೆ ತಿಳಿಸುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದು ಆಶಿಸಿಸಿದರು.
ಶಾಸಕ ಹರೀಶ ಪೂಂಜ ಅವರು, ರಾಷ್ಟ್ರೀಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿದ್ಯಾಪೀಠಮ್ ಮಾದರಿಯಾಗಲಿದೆ. ಶ್ರೀಗಳ ಬದುಕು ಭಾರತೀಯತೆ ಪುನರುತ್ಥಾನಕ್ಕೆ ಮುಡಿಪಾಗಿರುವುದು ನಮ್ಮೇಲ್ಲರ ಸೌಭಾಗ್ಯ. ಸರಕಾರದೊಂದಿಗೆ ಮಾತುಕತೆ ನಡೆಸುವ ದಿಕ್ಕಿನಲ್ಲಿ ಮತ್ತು ಕೆಲಸ ಕಾರ್ಯಗಳನ್ನು ಮಾಡಲು ಶ್ರೀಗಳ ಯಾವುದೇ ಸೂಚನೆಗೆ ಬದ್ಧನಾಗಿದ್ದೇನೆ ಎಂದರು.
ವೇಣೂರು, ಉರುವಾಲು, ಉಜಿರೆ ವಲಯದ ಹವ್ಯಕ ಬಂಧುಗಳು, ಸಮಾಜದ ವಿವಿಧ ಸ್ತರದ ಗಣ್ಯರು ಉಪಸ್ಥಿತರಿದ್ದರು. ಬಾಲ್ಯ ಶಂಕರ ಭಟ್ ಸ್ವಾಗತಿಸಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗ್ಡೆ ಪ್ರಸ್ತಾವಿಸಿದರು. ನಿವೃತ್ತ ಪ್ರಾಚಾರ್ಯ ಗಣಪತಿ ಭಟ್ ಕುಳಮರ್ವ ಹಾಗೂ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.