ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಪ್ರಕರಣಗಳನ್ನು ಯಶಸ್ವಿ ನಿಭಾಯಿಸಿ ಜಗತ್ತೇ ಆಶ್ಚರ್ಯ ಪಡೆಯುವ ರೀತಿ ಹೆಮ್ಮೆ ತಂದಿದ್ದಾರೆ. ವ್ಯಾಕ್ಸಿನೇಷನ್ ಅನಿವಾರ್ಯತೆ ಏನು ಎಂಬುದು ಪ್ರಸ್ತುತ ಎಲ್ಲರಿಗೂ ಅರಿವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಸೋಮವಾರ ಬಿ.ಸಿ.ರೋಡು ಬಳಿಯ ಬಿ.ಮೂಡ ಸರಕಾರಿ ಪ.ಪೂ.ಕಾಲೇಜು ಸಭಾಂಗಣದಲ್ಲಿ ದ.ಕ.ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಹಯೋಗದೊಂದಿಗೆ ತಾಲೂಕು ಮಟ್ಟದಲ್ಲಿ ೧೫ರಿಂದ ೧೮ ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಪ್ರಸ್ತುತ ತಾಲೂಕಿನಲ್ಲಿ ೧೩,೯೯೨ ಶಾಲೆಗೆ ಬರುವ ೧೫ ವರ್ಷ ಮೇಲ್ಪಟ್ಟ ಮಕ್ಕಳನ್ನು ಗುರುತಿಸಲಾಗಿದೆ. ಶಾಲೆಗೆ ಬರದ ಮಕ್ಕಳ ಕುರಿತು ಅಂಕಿಅಂಶಗಳನ್ನು ತೆಗೆದುಕೊಂಡು ಎಲ್ಲರಿಗೂ ಲಸಿಕೆ ನೀಡುವ ಕಾರ್ಯದ ಕುರಿತು ತಹಶೀಲ್ದಾರ್ ಹೆಚ್ಚಿನ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಸುಷ್ಮಾ ಚರಣ್, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಪ್ರಸ್ತಾವನೆಗೈದು, ತಾಲೂಕಿನಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ೯೭ ಶೇ., ೪೫ ವರ್ಷ ಮೇಲ್ಪಟ್ಟವರಿಗೆ ೧೦೦ ಶೇ. ೧೮ ವರ್ಷ ಮೇಲ್ಪಟ್ಟವರಿಗೆ ೮೫ ಶೇ. ಲಸಿಕಾ ಕಾರ್ಯ ನಡೆದಿದೆ. ೨ ಅಲೆ ಗಂಭೀರ ಸ್ವರೂಪ ಪಡೆದಿದ್ದು, ಮೂರನೇ ಅಲೆ ಮಕ್ಕಳಿಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ೧೫ ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯ ಆರಂಭಗೊಂಡಿದೆ. ೨೦೦೭ರ ನಂತರ ಹುಟ್ಟಿದ ಎಲ್ಲಾ ಮಕ್ಕಳು ಲಸಿಕೆ ಪಡೆಯುವುದಕ್ಕೆ ಅರ್ಹತೆ ಪಡೆದಿದ್ದಾರೆ. ೦.೫ ಎಂಎಲ್ ಡೋಸನ್ನು ಪಡೆದು ೨೮ ದಿನಗಳ ೨ನೇ ಡೋಸ್ ನೀಡಲಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಕಾರ್ಯಕ್ರಮ ನಿರ್ವಹಿಸಿದರು.