ಬೆಳ್ತಂಗಡಿ: ಭಕ್ತರು ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸಮಯಾವಕಾಶ ನೀಡುವುದೇ ಒಂದು ಸೇವೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಸೋಮವಾರ ಅಳದಂಗಡಿ ಸನಿಹದ ಹಾಣಿಂಜ ಸಾಲುಕಾಯೆರ್ ಶ್ರೀ ಮಹಮ್ಮಾಯಿ ದೇವಸ್ಥಾನದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವಾಲಯದ ನಿರ್ಮಾಣಕ್ಕೆ ಮೊದಲಾಗಿ ಸ್ಥಳೀಯರ ಪರಿಶ್ರಮವೇ ಮುಖ್ಯವಾಗುತ್ತದೆ. ಸಮಯ ನೀಡುವ, ಶ್ರಮ ಹಾಗೂ ಧನ ಸೇವೆಯ ಮೂಲಕ ಒಗ್ಗಟ್ಟಾಗಿ ದೇವರ ಸೇವೆ ಮಾಡಬೇಕು ಎಂದ ಶಾಸಕರು ದೇವಳದ ಪರಿಸರದಲ್ಲಿ ಕೊಳವೆ ಬಾವಿಯ ವ್ಯವಸ್ಥೆ ಹಾಗೂ ವೈಯಕ್ತಿಕ ಪ್ರಯತ್ನದಿಂದ 3 ಲಕ್ಷ ರೂ. ದೇಣಿಗೆ ನೀಡುತ್ತೇನೆಂದು ಆಶ್ವಾಸನೆ ನೀಡಿದರಲ್ಲದೆ ರೂ.50,000 ವನ್ನು ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಇಲ್ಲಿಂದ ಬಳಂಜವನ್ನು ಸಂಪರ್ಕಿಸಲು 1 ಕೋಟಿ ರೂ. ವೆಚ್ಚದಲ್ಲಿ ಶೀಘ್ರವಾಗಿ ಕಾಂಕ್ರೀಟ್ ರಸ್ತೆ ಮಾಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶ್ರೀ ಶಿವಪ್ರಸಾದ ಅಜಿಲ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಆಚಾರ್ಯ, ಶೇಖರ ದೇವಾಡಿಗ ಪಾಲಬೆ, ಉದ್ಯಮಿ ರಾಕೇಶ್ ಹೆಗ್ಡೆ, ರಾ.ಸ್ವ.ಸಂಘದ ಕಾರ್ಯವಾಹ ಸಂತೋಷ್ ಕಾಪಿನಡ್ಕ, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಸಂದೀಪ ಎನ್. ನೀರಲ್ಕೆ, ವ್ಯವಸ್ಥಾಪಕ ಸೋಮನಾಥ ಹೆಗ್ಡೆ, ಉಪಾಧ್ಯಕ್ಷ ಜಗದೀಶ ರೈ, ಆನಂದ ಪೂಜಾರಿ, ದರ್ಣಪ್ಪ ಪೂಜಾರಿ ದೋರಿಂಜ, ಕೋಶಾಧಿಕಾರಿ ಶಶಿಕಾಂತ ಪಾಲಬೆ, ಸದಸ್ಯರುಗಳು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಪ್ರಸ್ತಾವಿಸಿದರು. ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿ ಬಿಕ್ಕಿರ ವಂದಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ ದೇವಾಡಿಗ ಹಾಣಿಂಜ ಕಾರ್ಯಕ್ರಮ ನಿರ್ವಹಿಸಿದರು. ಅರ್ಚಕ ಪ್ರಕಾಶ ಭಟ್ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.