ಬೆಳ್ತಂಗಡಿ: ಕೆಳದಿ ಅರಸರು ವೀರಶೈವ ಮಲ್ಲವರಾಗಿದ್ದು, ಬೆಳ್ತಂಗಡಿ ತಾಲೂಕಿನ ಮಾಳವ ಯಾನೆ ಮಲ್ಲವ ಸಮಾಜದ ಬಂಧುಗಳು ನಮ್ಮ ಮಠಕ್ಕೆ ಸೇರಿದವರಾಗಿದ್ದಾರೆ ಎಂದು ಮಲ್ಲವ ಸಾಮ್ರಾಜ್ಯದ ಗುರು ಪರಂಪರಾನುಗತ ಮಹಾಮತ್ತಿನ ಭುವನಗಿರಿ ಸಂಸ್ಥಾನ ಮಠಾಧ್ಯಕ್ಷರಾದ ಕೆಳದಿ ಸಂಸ್ಥಾನದ ರಾಜಗುರು ಶ್ರೀ ಷ. ಬ್ರ. ಮರಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಭಾನುವಾರ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಹಾಗೂ ಮಾಳವ ಯಾನೆ ಮಲ್ಲವ ಯುವಕ ಸಂಘದ ವತಿಯಿಂದ ೨೬ ನೇ ವರ್ಷದ ಸಮಾವೇಶ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶೈವ ಪರಂಪರೆಯ ಮಲ್ಲವರು ಸಮರ್ಥ ಆಡಳಿತಗಾರರಾಗಿದ್ದರು. ಕೆಳದಿ ಅರಸರು ಹಲವಾರು ದೇವಾಲಯಗಳಿಗೆ ಉಂಬಳಿಗಳನ್ನು ನೀಡಿದ್ದು, ಹಲವಾರು ಮಠ, ಮಂದಿರಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ಆಡಳಿತದಲ್ಲಿ ಶಿವಪ್ಪ ನಾಯಕ ಹಾಗೂ ಚೆನ್ನಮ್ಮಾಜಿಯ ಆಡಳಿತ ಜನಪ್ರಿಯತೆಯನ್ನು ಪಡೆದಿತ್ತು. ಕಾಲನ ತುಳಿತಕ್ಕೆ ಒಳಗಾಗಿ ಈಗ ಕೆಳದಿ ಅರಸು ವಂಶಸ್ಥರು ಅತೀ ಹಿಂದುಳಿದವರಾಗಿರುತ್ತಾರೆ. ಯುವ ಜನತೆ ಹಿರಿಯರ ಮಾರ್ಗದರ್ಶನದಲ್ಲಿ ವೀರಶೈವ ಸಂಸ್ಕೃತಿ, ಆಚಾರ ವಿಚಾರವನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಾಗಿದೆ. ಕವಲೇದುರ್ಗ ಮಠದಲ್ಲಿ ಉಚಿತವಾಗಿ ವೇದಾಧ್ಯಯನ ಕಲಿಸುತ್ತಿದ್ದು, ಆಸಕ್ತ ಬಂಧುಗಳು ಇದರ ಅವಕಾಶವನ್ನು ಪಡೆಯಬಹುದು ಎಂದು ಹೇಳಿದರು.
ಮಂಗಳೂರು ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಕರಾವಳಿ ಭಾಗದಲ್ಲಿ ಮಾಳವ ಯಾನೆ ಮಲ್ಲವರ ಸಂಖ್ಯೆ ವಿರಳವಾಗಿದೆ. ಮುಂದಿನ ಜನಾಂಗಕ್ಕೆ ನಮ್ಮ ಸಮಾಜದ ಕುರಿತು ಮಾಹಿತಿ ನೀಡಬೇಕು. ಯಾವುದೇ ಗೊಂದಲ ಇಲ್ಲದಂತೆ ಗುರು ಪರಂಪರೆಯ ಆಧಾರದಲ್ಲಿ ನಾವು ಸಮಾಜ ಭಾಂಧವರು ಮುನ್ನಡೆಯಬೇಕು. ನಮ್ಮ ಆಚಾರ, ವಿಚಾರಗಳು ಮುಂದಿನ ಯುವ ಜನತೆಗೆ ತಿಳಿಯ ಪಡಿಸಬೇಕು. ಹಿರಿಯರು ಮಾರ್ಗದರ್ಶನ ನೀಡಿದರೆ ಯುವ ಜನತೆ ಮುಂದುವರಿಸಿಕೊಂಡು ಹೋಗುತ್ತಾರೆ. ನಾವೆಲ್ಲ ಸಮಾಜದ ಏಳಿಗೆಗೆ ಶ್ರಮಿಸೋಣ ಎಂದರು.
ಮುಖ್ಯ ಅತಿಥಿ ಉದ್ಯಮಿ ನಿತ್ಯಾನಂದ ಬಿ. ಅವರು ಮಾತನಾಡಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಲಹೆಗಾರ ನವನೀತ್ ಮಾಳವ, ಯುವಕ ಸಂಘದ ಅಧ್ಯಕ್ಷ ಚಿತ್ತರಂಜನ್ ಬೆಳ್ತಂಗಡಿ, ಕಾರ್ಯದರ್ಶಿ ನಾಗೇಶ್ ಲಾಯಿಲ, ಕೋಶಾಧಿಕಾರಿ ಲೀಲಾಧರ ಕಿಲ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮುದಾಯದ ಸಾಧಕರಾದ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ವಾಣಿಜ್ಯ ತೆರಿಗೆ ಇಲಾಖೆಯ ಉದ್ಯೋಗಿ ಗಣೇಶ್ ರಾವ್, ಕೊಕ್ಕಡ ಸಮುದಾಯ ಆಸ್ಪತ್ರೆಗೆ ವೈದಾಧಿಕಾರಿಯಾಗಿ ನಿಯೋಜನೆಗೊಂಡ ಡಾ. ತುಷಾರ, ಯಕ್ಷಗಾನ ಕಲಾವಿದ ಪವನ್ ರಾಜ್ ಅವರನ್ನು ಗೌರವಿಸಲಾಯಿತು. ಎಸ್ಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.
ಮೋಹನ್ ಬೆಳ್ತಂಗಡಿ ನೇತೃತ್ವದ ಸಪ್ತಸ್ವರಗಳ ಗಾನಯಾನ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಮಾಜ ಬಾಂಧವರಿಗೆ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಂಘದ ಕಾರ್ಯದರ್ಶಿ ಮೋನಪ್ಪ ಬೆಳ್ತಂಗಡಿ ವರದಿ ವಾಚಿಸಿದರು. ಕೋಶಾಧಿಕಾರಿ ಸತೀಶ್ ರಾಜ್ ಸಂದೇಶ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ಶಿವರಾಮ ಹೆಗ್ಡೆ ವಿಜೇತರ ಪಟ್ಟಿ ವಾಚಿಸಿದರು. ಗೌತಮ್ ಬೆಳ್ತಂಗಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.