ಬೆಳ್ತಂಗಡಿ : ಯುವಕರು ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ, ಆಚಾರ-ವಿಚಾರಗಳ ಅರಿವು ಮೂಡಿಸಿಕೊಂಡು ರಾಷ್ಟ್ರೀಯ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ ಎಂಬ ಪರಿಕಲ್ಪನೆಯಲ್ಲಿ ಉಜಿರೆಯಲ್ಲಿ ಶನಿವಾರ ನಡೆಯುತ್ತಿರುವ ಎರಡು ದಿನದ 3 ನೆಯ ರಾಜ್ಯ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಭಾಷೆಗಳು ಏಕಸೂತ್ರದಿಂದ ಪೋಣಿಸಿದಂತೆ ಇವೆ. ಹೀಗಾಗಿ ನಾವು ಭಾಷೆಯಿಂದ ವಿಘಟಿತರಾಗದೆ ಸಂಘಟಿತರಾಗಬೇಕು.ಅದಕ್ಕೆ ಇಂತಹ ಸಮ್ಮೇಳನ ಪ್ರೇರಣೆ ನೀಡಲಿ. ದೇಶದ ಏಕತೆಯ ಹೋರಾಟಕ್ಕೆ ಸಾಹಿತ್ಯವೂ ಪ್ರಧಾನವಾಗಿ ಕಾರಣವಾಗಿದೆ. ಖಡ್ಗಕ್ಕಿಂತ ಲೇಖನಿ ತೀವ್ರವಾಗಿದ್ದರೂ ಈಗ ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಮಾತೂ ಮುಖ್ಯವಾಗಿದೆ ಎಂದರು.
ಸಂಘಟನೆಗೆ ಸಾಹಿತ್ಯವೂ ಕಾರಣವಾಗಿದೆ. ಸಾಹಿತ್ಯವನ್ನು ಕುತೂಹಲಕರವಾಗಿ ಮಾಡುವ ಅವಶ್ಯಕತೆ ಇದೆ. ನಾವಿಂದು ನಮ್ಮವರನ್ನೇ ಎದುರು ಹಾಕಿಕೊಳ್ಳುವಂತಹ ಪರಿಸ್ಥಿತಿ ಉದ್ಭವವಾಗಿದೆ. ಯುವಕರು ತ್ಯಾಗಿಗಳ ಬಗ್ಗೆ ಅರಿತುಕೊಂಡು ಪ್ರಜ್ಞಾವಂತರಾಗಿ, ಚಿಂತಕರಾಗಿ ಮೂಡಿಬರಬೇಕಾದ ಕಾಲಘಟ್ಟ ಇದು ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಮೊಗಸಾಲೆ ಅವರು, ನಮ್ಮ ಹಿರಿಯರು ರೂಪಿಸಿದ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ನಾವು ದಿಢೀರಾಗಿ ಈಗ ಅಲ್ಲಗೆಳೆಯುವುದು ಅಥವಾ ಜಾಗತೀಕರಣದ ಈ ದಿನಗಳಲ್ಲಿ ಈ ಇತಿಹಾಸಕ್ಕೆ ಅರ್ಥ ಇಲ್ಲ ಎಂಬಂತೆ ಆಡಿಕೊಳ್ಳುವುದು ಸುತಾರಾಂ ಸರಿಯಲ್ಲ. ಭಾರತೀಯತೆ ಎನ್ನುವುದೇ ಬಹುತ್ವವಾಗಿದೆ ಎಂದರು.
ಈಗ ನಾವೆಲ್ಲರೂ ಬಹುರಾಷ್ಟ್ರೀಯ ಕಲ್ಪನೆಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ ಅಥವಾ ನವ ವಿಚಾರವಾದಿಗಳು ಅದನ್ನೇ ಹೇಳುತ್ತಿದ್ದಾರೆ. ಆದರೆ ನಮ್ಮ ಇದಿರು ಇರುವ ತಾಲಿಬಾನ್ ಸಂಸ್ಕೃತಿ ಮತ್ತು ಚೀನಾದೇಶದ ಆಕ್ರಮಣಕಾರಿ ಮನೋಭಾವ ಇದಕ್ಕೆ ವಿರುದ್ಧವಾಗಿದೆ ಮತ್ತು ಆತಂಕಕಾರಿಯಾಗಿದೆ. ಇನ್ನು ಕೆಲವೇ ಕೆಲವು ವರುಷಗಳಲ್ಲಿ ಜಗತ್ತನ್ನು ಈ ಸಂಸ್ಕೃತಿ ತಮ್ಮ ಬಾಹುಗಳ ಒಳಗೆ ಬಂಧಿಸಿಯಾವೇ ಎಂಬ ಆತಂಕವನ್ನು ವ್ಯಕ್ತಪಡಿಸಿದ ಮೊಗಸಾಲೆ ಅವರು, ಪ್ರಾಯಃ ಇದರಿಂದ ಹೊರಬರಲು ಇಲ್ಲವೇ ಇದನ್ನು ಇದಿರಿಸಲು ನಾವು ಇತಿಹಾಸದಲ್ಲಿರುವ ಸ್ವರಾಜ್ಯ ಅಥವಾ ರಾಷ್ಟ್ರೀಯತೆಯ ಪರಿಕಲ್ಪನೆಯು ಖಂಡಿತ ಹುಸಿ ಆದರ್ಶವಲ್ಲ, ಅದು ತೆರೆದ ವಾಸ್ತವ ಎಂದು ಮನಗಾಣಬೇಕು ಎಂದರು.ಸಮಸಮಾಜದ ಪರಿಕಲ್ಪನೆಯವರೆಲ್ಲ ಬ್ರಾಹ್ಮಣರು. ಸಂವಿಧಾನ ತಜ್ಞ ಅಂಬೇಡ್ಕರ್ ಇದೇ ಸಾಲಿಗೆ ಸೇರುತ್ತಾರೆ. ರಾಷ್ಟ್ರೀಯತೆ ಎಂದರೆ ಬದ್ಧತೆ. ರಾಷ್ಟ್ರೀಯ ಪ್ರಜ್ಞೆ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಭಾರತೀಯತೆಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಬೇಕು ಎಂದರು.
ಸಂಚಾಲಕ ಡಾl ಮಾಧವ ಎಂ.ಕೆ. ಸ್ವಾಗತಿಸಿದರು.ಅ.ಭಾ.ಸ.ಪ. ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಸ್ತಾವಿಸಿದರು. ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ ವಂದಿಸಿದರು.ಭ.ರಾ.ವಿಜಯಕುಮಾರ್ ನಿರ್ವಹಿಸಿದರು.