ಉಜಿರೆ: ಕಾಲೇಜು ರಸ್ತೆ ಅಗಲೀಕರಣ ಹಾಗು ಡಾಮರೀಕರಣದಿಂದ ಸುಂದರವಾಗಿ ಕಂಗೊಳಿಸುತ್ತಿರುವಂತೆ ಕೆಲವೊಂದು ಆಘಾತಕಾರಿ ಘಟನೆಗಳು ಸಾರ್ವಜನಿಕ ಸಂಚಾರಕ್ಕೆ ಮಾರಕವಾಗಿ ಪರಿಣಮಿಸಿವೆ.
ರಸ್ತೆಯ ಎರಡೂ ಬದಿಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅಗಲವಾದ ಫುಟ್ ಪಾತ್ ನಿರ್ಮಿಸಲಾಗಿತ್ತು. ಇದೀಗ ಎರಡು ವಾರದಿಂದ ಖಾಸಗಿ ಮೊಬೈಲ್ ಕಂಪನಿಯ ಕೇಬಲ್ ದುರುಸ್ತಿಗೆಂದು ಕಾಲೇಜು ರಸ್ತೆಯ ಉದ್ದಕ್ಕೂ 6 ರಿಂದ 8 ಭಾರಿ ಆಳದ ಗುಂಡಿ ತೆಗೆದು ಕಾಮಗಾರಿ ನಡೆಯುತ್ತಿದೆ. ಇದರಿಂದ ಫುಟ್ ಪಾತ್ ನಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆತಂಕವುಂಟಾಗಿದೆ.
ರಸ್ತೆ ಬದಿಯ ಫುಟ್ ಪಾತ್ ಗೆ ಇಂಟೆರ್ ಲಾಕ್ ಅಳವಡಿಸಿದ್ದನ್ನು ತೆಗೆದು ಗುಂಡಿ ನಿರ್ಮಿಸಿ ರುವುದರಿಂದ ನಡೆದುಕೊಂಡು ಹೋಗುವವರು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾಗುತ್ತಿದೆ. ಕೆಲವೊಂದು ಗುಂಡಿಗಳಿಗೆ ಸುತ್ತ ರಕ್ಷಣಾ ಟೇಪ್ ಅಳವಡಿಸಿದ್ದರೂ ಇನ್ನೂ ಕೆಲವಕ್ಕೆ ಏನೊಂದೂ ರಕ್ಷಣಾಭದ್ರತೆಯಿಲ್ಲ. ರಾತ್ರಿ ವೇಳೆ ಫುಟ್ ಪಾತ್ ನಲ್ಲಿ ಸಂಚರಿಸುವುದು ಪ್ರಾಣಕ್ಕೇ ಅಪಾಯಕಾರಿ. ಹೊಸದಾಗಿ ದಾರಿದೀಪ ಅಳವಡಿಕೆಗಾಗಿ ಹಿಂದಿನ ದಾರಿದೀಪ ತೆಗೆಯಲಾಗಿದ್ದು ರಾತ್ರಿ ವೇಳೆ ಕತ್ತಲಲ್ಲಿ ಸಂಚರಿಸುವುದು ಪ್ರಾಣಕ್ಕೆ ಸಂಚಕಾರ! ಕೆಲವು ಗುಂಡಿಗಳನ್ನಂತೂ ಅರ್ಧಂಬರ್ಧ ಮುಚ್ಚಿ ಕೈತೊಳೆದುಕೊಂಡಿದ್ದಾರೆ. ದಿನನಿತ್ಯ ಸಹಸ್ರಾರು ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಸಂಚರಿಸುವ ಮುಖ್ಯ ರಸ್ತೆಯ ಫುಟ್ ಪಾತ್ ದುರವಸ್ಥೆ ಬಗೆಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾರಿಗೂ ಮಾಹಿತಿಯಿಲ್ಲ
ಮುಖ್ಯ ಹೆದ್ದಾರಿ ಬದಿ ಕಾಮಗಾರಿ ನಡೆಸುವ ಬಗೆಗೆ ಯಾರಿಗೂ ಮಾಹಿತಿ ನೀಡಿಲ್ಲ. ಪಂಚಾಯತ್ ಗೂ ಆ ಬಗೆಗೆ ಯಾವುದೇ ಸೂಚನೆ ಅಥವಾ ಅನುಮತಿ ಪಡೆದಿಲ್ಲವೆನ್ನಲಾಗುತ್ತಿದೆ. ಯಾರ ಗಮನಕ್ಕೂ ಬಾರದೆ ಏಕಾಏಕಿ ಸಾರ್ವಜನಿಕ ಸಂಚಾರದ ವ್ಯವಸ್ಥೆಯನ್ನು ಹಾಳುಗೆಡಹುತ್ತಿ ರುವ ಮೊಬೈಲ್ ಕಂಪೆನಿ ಮನಬಂದಂತೆ ಗುಂಡಿ ತೆಗೆದು ಅರ್ಧಂಬರ್ಧ ಕಾಮಗಾರಿ ನಡೆಸಿ ಗುಂಡಿ ಮುಚ್ಚದೇ ತೆರಳಿದರೆ ಸಾರ್ವಜನಿಕರು ಯಾರನ್ನು ಕೇಳಬೇಕು? ರಸ್ತೆ ಮಧ್ಯದ ದಾರಿದೀಪಗಳನ್ನು ತೆಗೆದು 2-3 ವಾರಗಳೇ ಸಂದರೂ ಹೊಸದಾಗಿ ರಸ್ತೆ ದೀಪ ಅಳವಡಿಸುವ ಕಾಮಗಾರಿ ನಡೆದಿಲ್ಲ. ರಸ್ತೆ ಮಧ್ಯದ ವಿದ್ಯುತ್ ಡೈರೆಕ್ಟ್ ಲೈನನ್ನು ಮೆಸ್ಕಾಂ ಇಲಾಖೆ ರಸ್ತೆ ಬದಿಗೆ ಸ್ಥಳಾಂತರಿಸಿದೆ. ಕಾಲೇಜು ರಸ್ತೆ ರಾತ್ರಿ ವೇಳೆ ದಾರಿದೀಪಗಳಿಲ್ಲದೆ ಕತ್ತಲಲ್ಲಿದೆ.
ವೇಗಕ್ಕೆ ಮಿತಿಯಿರಲಿ ಕಾಲೇಜು ರಸ್ತೆ ಅಗಲೀಕರಣ ಹಾಗೂ ಡಾಮರೀಕರಣದಿಂದ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದಂತೆ ದ್ವಿಚಕ್ರ ವಾಹನಗಳು ಮಿತಿಮೀರಿದ ವೇಗದಿಂದ ಧಾವಿಸಿ ಬರುವುದರಿಂದ ರಸ್ತೆ ದಾಟುವ ವಿದ್ಯಾರ್ಥಿಗಳು, ವೃದ್ಧರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಆತಂಕಕಾರಿಯಾಗಿವೆ. ಶಿಕ್ಷಣ ಸಂಸ್ಥೆಗಳ ವಲಯವಾದ ಹಿನ್ನೆಲೆಯಲ್ಲಿ ದ್ವಿಚಕ್ರವಾಹನ ಚಾಲಕರು ಮಿತವಾದ ವೇಗದಲ್ಲಿ ವಾಹನ ನಡೆಸಿ ಅನಿರೀಕ್ಷಿತ ಅನಾಹುತ ಗಳಿಂದ ದುರಂತ ತಪ್ಪಿಸಬೇಕಾಗಿದೆ. ರಸ್ತೆ ದಾಟುವ ಸಾರ್ವಜನಿಕರ ಜೀವ ಪ್ರಾಣದ ಬಗೆಗೂ ಎಚ್ಚರಿಕೆಯಿರಬೇಕು.
ಕಾಲೇಜು ರಸ್ತೆ ಮುಂಭಾಗದಲ್ಲಿ ಪೆರ್ಲಕ್ಕೆ ತಿರುಗುವ ರಸ್ತೆ ಬದಿ ಆಟೋಗಳು ಪಾರ್ಕಿಂಗ್ ನಡೆಸುವುದರಿಂದ ಶಾಲೆಗಳಿಗೆ ಬರುವ ವಾಹನಗಳು,ಖಾಸಗಿ ವಾಹನಗಳು , ದ್ವಿಚಕ್ರ ವಾಹನಗಳ ಒತ್ತಡ ದಿಂದ ಬೆಳಿಗ್ಗೆ ಹಾಗೂ ಸಂಜೆ ಶಾಲೆ ಬಿಡುವ ವೇಳೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು ಅದಕ್ಕೆ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ವಿದ್ಯಾರ್ಥಿಗಳೂ ಸಂಚಾರಕ್ಕೆ ಪರದಾಟ ಪಡಬೇಕಾಗುತ್ತಿದೆ.