ಬೆಳ್ತಂಗಡಿ : ಹೆದ್ದಾರಿ ಬದಿ ಟೆಂಟ್ ಹಾಕಿ ವಾಸ್ತವ್ಯ ಹೂಡಿರುವುದನ್ನು ಸ್ಥಳೀಯರು ಆಕ್ಷೇಪಿಸಿದ ಕಾರಣದಿಂದ ಪಂಚಾಯಿತಿಗಳ ವತಿಯಿಂದ ಅವರನ್ನು ಸ್ಥಳಾಂತರಿಸಲು ಸೂಚಿಸಲಾಯಿತು.
ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಾಗಿ ಆಗಮಿಸಿದ್ದ ಹೊರಜಿಲ್ಲೆಯ ಕಾರ್ಮಿಕರು ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ-ಕಲ್ಮಂಜ ಗ್ರಾಮಗಳ ಗಡಿಭಾಗವಾದ ನಿಡಿಗಲ್ ಎಂಬಲ್ಲಿ ಸ್ಥಳೀಯಾಡಳಿತದ ಯಾವುದೇ ಅನುಮತಿ ಪಡೆಯದೆ ಕಳೆದ ಎರಡು ದಿನಗಳಿಂದ 6 ಟೆಂಟುಗಳಲ್ಲಿ ಪುಟ್ಟ ಮಕ್ಕಳ ಸಹಿತ ಸುಮಾರು 20 ಮಂದಿ ವಾಸ್ತವ್ಯ ಹೂಡಿದ್ದರು.
ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಸ್ಥಳದ ಪರಿಸರದಲ್ಲಿ ಇತರ ಮನೆಗಳು,ಸಮೀಪದ ಹೆದ್ದಾರಿಯಲ್ಲಿ ವಿಪರೀತ ವಾಹನ ಸಂಚಾರ,ಹಾಗೂ ಕಲ್ಮಂಜ ಭಾಗದಲ್ಲಿ ಹರಿಯುವ ನೇತ್ರಾವತಿ ನದಿಯು ಇದೆ. ಸಾಂಕ್ರಾಮಿಕ ರೋಗ, ಸ್ವಚ್ಛತೆಯ ದೃಷ್ಟಿಯಲ್ಲಿ ಅಪರಿಚಿತರು ವಾಸ್ತವ್ಯ ಹೂಡಿರುವ ಬಗ್ಗೆ ಮುಂಡಾಜೆ,ಕಲ್ಮಂಜ ಪಂಚಾಯತಿಗಳಿಗೆ ಎರಡು ದಿನಗಳಿಂದ ಅನೇಕ ಮಂದಿ ಮೌಖಿಕವಾಗಿ ದೂರುಗಳನ್ನು ಸಲ್ಲಿಸಿ ಆಕ್ಷೇಪಿಸಿದ್ದರು.
ಪರಿಶೀಲನೆ
ದೂರುಗಳು ಬಂದ ಹಿನ್ನೆಲೆಯಲ್ಲಿ ಮುಂಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿನಿ ರವಿ, ಉಪಾಧ್ಯಕ್ಷೆ ದಿಶಾ ಪಟವರ್ಧನ್, ಸದಸ್ಯರಾದ ರಾಮಣ್ಣ ಶೆಟ್ಟಿ,ಗಣೇಶ ಬಂಗೇರ ಪಿಡಿಒ ಸುಮಾ ಎ.ಎಸ್, ಕಲ್ಮಂಜ ಗ್ರಾಮ ಪಂಚಾಯಿತಿ ಪಿಡಿಒ ಇಮ್ತಿಯಾಜ್, ಗುರುವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಸಮಯ ಟೆಂಟ್ ನಲ್ಲಿ ವಾಸ್ತವ್ಯವಿದ್ದ ಯವರು ಕಾಮಗಾರಿಗೆ ತೆರಳಿದ್ದು,ಸ್ಥಳದಲ್ಲಿದ್ದ ಮಹಿಳೆ ಗುತ್ತಿಗೆದಾರ ಕಂಪನಿಯೊಂದು ತಮಗೆ ಇಲ್ಲಿ ವಾಸ್ತವ್ಯ ಇರಲು ವ್ಯವಸ್ಥೆ ಮಾಡಿ ಕೊಟ್ಟಿರುವುದಾಗಿ ತಿಳಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ಕಂಪೆನಿ ಇಂಜಿನಿಯರ್ ಕಾರ್ಮಿಕರನ್ನು ಶುಕ್ರವಾರದೊಳಗೆ ಇಲ್ಲಿಂದ ತೆರವುಗೊಳಿಸಿ ಬೇರೆ ಕಡೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.