ಬೆಳ್ತಂಗಡಿ : ರಾಜ್ಯ ಸರಕಾರವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಕಾಯಿದೆಗೆ ತಿದ್ದುಪಡಿ ತಂದಿರುವ ಬಗ್ಗೆ ಸಹಕಾರ ಸಚಿವ ಎಚ್.ಟಿ.ಸೋಮಶೇಖರ ತಿಳಿಸಿದ್ದು, ಈ ಕಾಯಿದೆಗೆ ತಿದ್ದುಪಡಿ ತಂದಿರುವುದನ್ನು ನಮ್ಮ ಕರ್ನಾಟಕ ರಾಜ್ಯ ರೈತ ಸಂಘವು ಸ್ವಾಗತಿಸುತ್ತದೆ ಎಂದು ರಾಜ್ಯಾಧ್ಯಕ್ಷ ಎನ್.ಎಸ್.ವರ್ಮಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಾಯ್ದೆ ತಿದ್ದುಪಡಿಯಿಂದ ರೈತರು ದಲ್ಲಾಳಿಗಳ ಕಪಿಮುಷ್ಠಿಯಿಂದ ಪಾರಾಗುತ್ತಾರೆ. ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯದ ಯಾವ ಭಾಗದಲ್ಲೂ ತಂದು ಮಾರಾಟಮಾಡಬಹುದಾಗಿದೆ ಎಂದರು.
ಈ ಹಿಂದೆ ಕೇಂದ್ರ ಸರಕಾರ ತಂದಿದ್ದ ಕೃಷಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆದಿದ್ದು ದುರಾದೃಷ್ಟಕರ ಎಂದ ಅವರು ದೆಹಲಿಯಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ಗಾಗಿ ಡೋಂಗಿ ಚಳುವಳಿ ನಡೆಸಿತ್ತೇ ಹೊರತು ಅಲ್ಲಿ ಪ್ರತಿಭಟಿಸಿದವರಾರು ರೈತರಲ್ಲ. ರೈತರು ಹಿಂಸೆಯ ರೂಪದಲ್ಲಿ ಎಂದಿಗೂ ಪ್ರತಿಭಟನೆಗೆ ಮುಂದಾಗಲಾರರು. ಇದು ದುರುದ್ದೇಶಪೂರಿತ ಮತಬ್ಯಾಂಕ್ ಪ್ರತಿಭಟನೆ ಎಂದು ಆರೋಪಿಸಿದರು.
ಆದರೆ ಕೇಂದ್ರ ಸರಕಾರದ ಖಾಸಗೀಕರಣ ಮಾಡುವುದನ್ನು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಮೆಸ್ಕಾಂ ಖಾಸಗೀಕರಣಕ್ಕೆ ಮುಂದಾಗಿದೆ ಎಂಬ ಮಾಹಿತಿ ಲಭಿಸಿದ್ದು, ಇದರಿಂದ ರೈತನಿಗೆ ಅನ್ಯಾಯವಾಗಲಿದೆ. ಖಾಸಗೀಕರಣಕ್ಕಿಂತ ಸೋಲಾರ್ ಪಂಪ್ಸೆಟ್ ಒದಗಿಸಲು ಸರಕಾರ ಮುಂದಾಗಬೇಕು. ಸಬ್ಸಿಡಿ ರೂಪದಲ್ಲಿ ಬರಡು ಭೂಮಿಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸುವ ಚಿಂತನೆಗೆ ಸರಕಾರ ಮುಂದಾಗಬೇಕು ಎಂದರು. ರೈತರಿಗೆ ಪಂಪ್ಸೆಟ್ ಬಿಲ್ ವಿಚಾರವಾಗಿ ಇಂಧನ ಸಚಿವ ಸುನೀಲ್ ಕುಮಾರ್ ನೀಡಿರುವ ಹೇಳಿಕೆ ಉಳಿಸಿಕೊಳ್ಳದೇ ಹೋದಲ್ಲಿ ಪ್ರತಿಭಟನೆ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.
ಅತಿವೃಷ್ಠಿ ಬೆಳೆಹಾನಿಗೆ ಪರಿಹಾರ ಒದಗಿಸಿ
ಅತಿವೃಷ್ಠಿಯಿಂದ ಅವಿಭಜಿತ ದ.ಕ. ರೈತರು ಭತ್ತ ,ಅಡಿಕೆ ಬೆಳೆಯಿಂದ ಅಪಾರ ನಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ಕೂಡಲೇ ರೈತರಿಗಾದ ನಷ್ಟದ ಕುರಿತು ವಿವರ ಸಂಗ್ರಹ ಮಾಡಿ ರಾಜ್ಯ ಸರಕಾರಕ್ಕೆ ಕಳುಹಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪ್ರಶಾಂತ್ ಜಶನ್, ತಾಲೂಕು ಅಧ್ಯಕ್ಷ ಅಬ್ದುಲ್ ರೆಹೆಮಾನ್, ರೈತಮುಖಂಡರಾದ ಐತಪ್ಪ ಗೌಡ, ಜಯರಾಮ್, ವಸಂತ ಶೆಟ್ಟಿ, ಸೋಮನಾಥ ಗೌಡ ಉಪಸ್ಥಿತರಿದ್ದರು.