ಬೆಳ್ತಂಗಡಿ: ಸರಕಾರವು ನಗರ ಹಾಗೂ ಸ್ಥಳೀಯಾಡಳಿತದ ಮೂಲಕ ನಾನಾ ಯೋಜನೆಗಳನ್ನು ತರುವಲ್ಲಿ ಶ್ರಮಿಸುತ್ತಿದೆ. ಆದರೆ ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ದಿಟ್ಟ ಹೆಜ್ಜೆ ಜನಪ್ರತಿನಿಧಿಗಳಿಂದಾದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳಡಿ ಮನೆ ದುರಸ್ತಿ, ಅಂಗವಿಕಲರಿಗೆ ಸಹಾಯಧನದ ಚೆಕ್ಕನ್ನು ಪ.ಪಂ. ಸಭಾಂಗಣದಲ್ಲಿ ಜ.೨೪ರಂದು ವಿತರಿಸಿ ಮಾತನಾಡಿದರು.
ಜನಪರ ಕಾರ್ಯಯೋಜನೆ ದೃಷ್ಟಿಯಲ್ಲಿ ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ಪ್ರಾವಣಿಕವಾಗಿ ಪ್ರಯತ್ನಿಸುತ್ತಿದೆ. ಮನೆ ನಿರ್ಮಾಣ ಸಹಿತ, ಅಂಗವಿಕಲರ ಶ್ರೇಯೋಭಿವೃದ್ಧಿಗೆ ಬೇಕಾದ ಅಗತ್ಯ ನೆರವು ಒದಗಿಸುವ ಮೂಲಕ ಅವರ ನೋವಿಗೆ ಸ್ಪಂದನೆ ನೀಡಿದೆ ಎಂದರು.
64 ಮಂದಿ ಫಲಾನುಭವಿಗಳಿಗೆ ಸಹಾಯ ಧನ
ಶೇ.೨೪.೧೦ರ ನಿಧಿಯಲ್ಲಿ ಮನೆ ದುರಸ್ತಿಗೆ ಪ.ಜಾತಿಯ ೧೪ ಮಂದಿಗೆ ತಲಾ ೧೫,೦೦೦ ರೂ. ಶೇ.೨೪.೧೦ರ ನಿಧಿಯಲ್ಲಿ ಪ.ಪಂಗಡದ ೫ ಮಂದಿ ಫಲಾನುಭವಿಗಳಿಗೆ ತಲಾ ೧೫,೦೦೦ ರೂ., ಶೇ.೭.೨೫ರ ನಿಧಿಯಲ್ಲಿ ಇತರ ೪ ಮಂದಿ ಫಲಾನುಭವಿಗಳಿಗೆ ತಲಾ ೧೦,೦೦೦ ರೂ. ನ ಚೆಕ್ ಹಸ್ತಾಂತರಿಸಲಾಯಿತು. ಉಳಿದಂತೆ ೪೧ ಮಂದಿ ವಿಕಲಚೇತನರಿಗೆ ತಲಾ ೨,೦೦೦ ರೂ.ನಂತೆ ಸಹಾಯಧನವನ್ನು ನೀಡಲಾಯಿತು.
ಪ.ಪಂ. ಅಧ್ಯಕ್ಷೆ ರಜನಿಕ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಸದಸ್ಯರಾದ ಡಿ.ಜಗದೀಶ್, ಲೋಕೇಶ್, ಶರತ್, ಅಂಬರೀಷ್, ಗೌರಿ ಉಪಸ್ಥಿತರಿದ್ದರು.