ಮೈಸೂರು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಉತ್ತರ ಭಾಗದ ಕೈಶಾಲೆಯ ಜಗಲಿ ಕುಸಿಯುವ ಹಂತ ತಲುಪಿದೆ.
ಸಾಮಾನ್ಯವಾಗಿ ಭಕ್ತರು ಶ್ರೀಕಂಠೇಶ್ವರನ ದರ್ಶನ ಪಡೆಯಲು ಇದೇ ಜಗುಲಿಯ ಮೇಲೆ ನಿಲ್ಲುತ್ತಾರೆ. ಆದರೀಗ ಇಲ್ಲಿನ ಜಗುಲಿ ಕುಸಿದಿರುವುದು ಆತಂಕದ ವಿಚಾರವಾಗಿದೆ.
ಹಾಗೆನೋಡಿದರೆ ಐತಿಹಾಸಿಕವಾಗಿ ಪೌರಾಣಿಕವಾಗಿ ಹೆಸರು ವಾಸಿಯಾಗಿರುವ ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇತ್ತೀಚೆಗೆ ಕೊರೊನಾ ಕಾರಣದಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ.
ಇನ್ನು ಈ ದೇಗುಲವು ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಗೆ ಒಳಪಡುವುದರಿಂದ ಈ ದೇಗುಲದ ಯಾವುದೇ ದುರಸ್ತಿ ಕಾರ್ಯ ಮಾಡಬೇಕಾದರೂ ಪುರಾತತ್ವ ಇಲಾಖೆ ಹಸಿರು ನಿಶಾನೆ ನೀಡುವುದು ಅಗತ್ಯವಾಗಿದೆ. ಹೀಗಾಗಿ ತಕ್ಷಣಕ್ಕೆ ಯಾವುದನ್ನೂ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ದೇವಸ್ಥಾನದ ಸುತ್ತಮುತ್ತಲ ವಿಗ್ರಹಗಳು ಬಿರುಕುಗೊಂಡಿದ್ದು ದೇವಸ್ಥಾನದ ಅಧಿಕಾರಿಗಳು ಈ ಬಗ್ಗೆ ಕಳೆದ ಒಂದೆರಡು ತಿಂಗಳ ಹಿಂದೆಯೇ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದು, ಅಲ್ಲಿಂದ ಅನುಮತಿ ಬಂದ ನಂತರವಷ್ಟೆ ದೇವಸ್ಥಾನದ ದುರಸ್ತಿ ಕಾರ್ಯವನ್ನು ಮಾಡಬೇಕಾಗಿದೆ. ಇದೀಗ ದೇಗುಲದ ಜಗುಲಿ ಕುಸಿದ ಕಾರಣ ಸರದಿ ಸಾಲಿನಲ್ಲಿ ನಿಂತಾಗ ಅಪ್ಪಿತಪ್ಪಿ ಎಡಭಾಗಕ್ಕೆ ವಾಲಿದರೆ ಹಳ್ಳಕ್ಕೆ ಬೀಳುವುದಂತೂ ಗ್ಯಾರಂಟಿ ಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ದೇಗುಲದ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ.