ಬೆಳ್ತಂಗಡಿ: ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾದರೆ ಉತ್ತಮ ನಾಯಕನ ಆಯ್ಕೆ ಜತೆ ಅಭಿವೃದ್ಧಿಗೆ ಪೂರಕವಾದ ಆಡಳಿತ ದೊರಕಲು ಸಾಧ್ಯ. ಮತದಾರರ ಸೇರ್ಪಡೆಗೆ ಇಂದು ನಾನಾ ಅನುಕೂಲಕರ ಯೋಜನೆಗಳನ್ನು ಸಿದ್ಧಪಡಿಸಿದ್ದು ಇದರ ಪ್ರಯೋಜನವನ್ನು ಅರ್ಹರು ಪಡೆಯುವಂತಾಗಬೇಕು,ಇದಕ್ಕಾಗಿ ಪಂಚಾಯಿತಿ ಮಟ್ಟದಿಂದಲೇ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ತಹಸೀಲ್ದಾರರ ಕಚೇರಿಯ ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಮಾತನಾಡಿ ನಗರ ಪ್ರದೇಶದ ಸುಶಿಕ್ಷಿತ ಮತದಾರರು ಮತದಾನದಿಂದ ವಿಮುಖರಾಗುತ್ತಿರುವುದು ವಿಷಾದದ ಸಂಗತಿ. ಸಣ್ಣ ವಯಸ್ಸಿನಿಂದಲೇ ಮತದಾನದ ಅರಿವು ಮೂಡಿಸುವ ಕುರಿತು ಶಾಲಾ-ಕಾಲೇಜುಗಳಲ್ಲಿ ಎಲ್.ಇ.ಸಿ. ಕ್ಲಬ್ ರಚಿಸಿ ಮಕ್ಕಳಿಗೆ ಮತದಾನದ ಮಹತ್ವದ ಅರಿವು ನೀಡುವ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದು ಭವಿಷ್ಯದಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದರು.
ಚುನಾವಣೆ ಶಾಖೆಯ ಉಪತಹಸೀಲ್ದಾರ್ ದಯಾನಂದ, ರವಿಕುಮಾರ್ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್ ಸ್ವಾಗತಿಸಿದರು. ತಹಸೀಲ್ದಾರ್ ಕಚೇರಿಯ ದರ್ಜೆ ಸಹಾಯಕ ಮೃತ್ಯುಂಜಯ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಕಚೇರಿ ಸಿಬ್ಬಂದಿ ಹೇಮಾ ಕೆ. ವಂದಿಸಿದರು.
ಬಹುಮಾನ ವಿತರಣೆ
ತಾಲೂಕಿನ ಪ್ರೌಢಶಾಲೆ, ಪದವಿಪೂರ್ವ ವಿಭಾಗ ಹಾಗೂ ಪದವಿ ವಿಭಾಗ ವಿದ್ಯಾರ್ಥಿಗಳಿಗೆ ಮತದಾರರ ಸಾಕ್ಷರತಾ ಸಂಘಗಳ ಮೂಲಕ ನಡೆದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಚುನಾವಣೆ ಕುರಿತು ಕನ್ನಡ,ಆಂಗ್ಲ ಪ್ರಬಂಧ, ಪೋಸ್ಟರ್ ಕೋಲಾಜ್ ಮುಂತಾದ ಸ್ಪರ್ಧೆಗಳು ಜರಗಿದ್ದವು.