ಬೆಳ್ತಂಗಡಿ: ಪುನರ್ನಿರ್ಮಾಣಗೊಳ್ಳುತ್ತಿರುವ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದ ಗೋಡೆ ಸುತ್ತುಪೌಳಿ ಹಾಗೂ ಪೈಪ್ ಇತ್ಯಾದಿಗಳಿಗೆ ಕಿಡಿಗೇಡಿಗಳು ಕಳೆದ ನಾಲ್ಕು ದಿನಗಳ ಹಿಂದೆ ಹಾನಿ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಪ್ರತಿಭಟನೆ ಜರಗಿತು.
ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರು, ಕಾರ್ಯಕರ್ತರು, ಭಕ್ತಾದಿಗಳು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ದೇವಸ್ಥಾನಕ್ಕೆ 100 ವರ್ಷಗಳಾಗುತ್ತಿದ್ದು, ಸಮೀಪದ ಜಾಗದಲ್ಲಿ ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡುವ ಕಾಮಗಾರಿಯನ್ನು ಆಡಳಿತ ಮಂಡಳಿ ವತಿಯಿಂದ ಆರಂಭಿಸಲಾಗಿದೆ.
ಈಗಾಗಲೇ ಗೋಡೆ ಸುತ್ತುಪೌಳಿ ಅಗತ್ಯ ಪೈಪ್ ಲೈನ್ ಹಾಗೂ ಇನ್ನಿತರ ಕಾಮಗಾರಿಗಳು ಪ್ರಗತಿಯಲ್ಲಿವೆ. ಇತ್ತೀಚೆಗೆ ದೇವಸ್ಥಾನದ ನಿರ್ಮಾಣ ಕೆಲಸಗಳಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಿದ್ದು,ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಕುರಿತು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಹಾಗೂ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ದೇವಸ್ಥಾನಕ್ಕೆ ಹಾನಿ ಉಂಟು ಮಾಡಿದವರ ವಿರುದ್ಧ ತಕ್ಷಣ ಸರಿಯಾದ ಕ್ರಮ ಕೈಗೊಳ್ಳಬೇಕು, ದೇವಸ್ಥಾನದ ಜಾಗವನ್ನು ಆಕ್ರಮಣ ಮಾಡಲಾಗಿದ್ದು ಇದರಲ್ಲಿ ಕಂದಾಯ ಇಲಾಖೆ,ಅರಣ್ಯ ಇಲಾಖೆ ಶಾಮೀಲಾಗಿರುವ ಸಂದೇಹವಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ, ಬಜರಂಗದಳದ ಸಂಚಾಲಕ ಸಂತೋಷ್ ಅತ್ತಾಜೆ,ಆಡಳಿತ ಮಂಡಳಿಯ ಗಣೇಶ ಪ್ರಭು,ನಾಗೇಶ್ ಪ್ರಭು ಮತ್ತು ಇತರ ಸದಸ್ಯರು,ಶ್ರೀಧರ ನಿಡಿಗಲ್, ಮಂಜುನಾಥ ಶೆಟ್ಟಿ, ಶಶಿಧರ ಕಲ್ಮಂಜ, ರಾಮಣ್ಣ ಶೆಟ್ಟಿ ಮೊದಲಾದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಾಗದ ತಕರಾರು
ದೇವಸ್ಥಾನದ ಜಾಗಕ್ಕೂ ಸಮೀಪದ ಜಾಗದ ವ್ಯಕ್ತಿಗೂ ಜಾಗದ ತಕರಾರು ಇದ್ದು, ಇದು ಹೈಕೋರ್ಟ್ ನಲ್ಲಿದ್ದು ಇನ್ನು ಇತ್ಯರ್ಥಗೊಂಡಿಲ್ಲ. ದೇವಸ್ಥಾನ ನಿರ್ಮಿಸುತ್ತಿರುವ ಜಾಗದಲ್ಲಿ ಸ್ಥಳೀಯ ವ್ಯಕ್ತಿಯ ಸ್ವಲ್ಪ ಜಾಗ ಇದೆ ಎಂದು ಹೇಳಲಾಗುತ್ತದೆ. ಆದರೆ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗಕ್ಕೆ ಸ್ಥಳೀಯ ವ್ಯಕ್ತಿ ಬೇಲಿ ಹಾಕಿರುವ ಕುರಿತು ಆಡಳಿತ ಮಂಡಳಿ ಹೇಳುತ್ತಿದೆ.ಸದ್ಯ ದೇವಸ್ಥಾನಕ್ಕೆ ಉಂಟಾಗಿರುವ ಹಾನಿಗೆ ಸ್ಥಳೀಯ ಜಾಗದ ಫಿಲಿಪ್ ಎಂಬ ವ್ಯಕ್ತಿಯೇ ಕಾರಣ ಎಂದು ಆಡಳಿತ ಮಂಡಳಿ ಆರೋಪ ವ್ಯಕ್ತ ಪಡಿಸಿದೆ.ಫಿಲಿಪ್ ಅವರನ್ನು ವಶಕ್ಕೆ ಪಡೆದಿರುವ ಧರ್ಮಸ್ಥಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.