ಬೆಳ್ತಂಗಡಿ: ಇಂದು ಹಿಂದೂ ಸಂಘಟನೆಗಳು ತಂದಿರುವ ಪರಿವರ್ತನೆಯಿಂದ ಇತಿಹಾಸದ ಪುನರಾವರ್ತನೆಯಾಗುತ್ತಿದೆ. ಜಾತಿ ಹೆಸರಲ್ಲಿ ಚದುರಿದ್ದ ಹಿಂದುಗಳು ಒಂದು ಗೂಡಿದ್ದಾರೆ. ಯುವಕರು ದುರಭ್ಯಾಸಗಳಿಂದ ದೂರವಾಗುತ್ತಿದ್ದಾರೆ. ನಮ್ಮ ಧರ್ಮದ ಮೇಲೆ ಎಷ್ಟೇ ಆಕ್ರಮಣ ಉಂಟಾದರೂ ನಮ್ಮ ಪೂರ್ವಜರ ಕ್ಷಾತ್ರತೇಜಸ್ಸು ನಮ್ಮನ್ನು ರಕ್ಷಿಸುತ್ತದೆ ಇದು ಮುಂದಿನ ಪೀಳಿಗೆಗೆ ಪೂರಕವಾಗಲಿದೆ ಎಂದು ಪ್ರಖರ ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಹೇಳಿದರು.
ಅವರು ಸೋಮವಾರ ವಿಶ್ವಹಿಂದೂ ಪರಿಷತ್ ಭಜರಂಗದಳ ಮಾತೃಮಂಡಳಿ, ದುರ್ಗಾ ವಾಹಿನಿ, ಬೆಳ್ತಂಗಡಿ ಪ್ರಖಂಡ ವತಿಯಿಂದ ಗೀತಾ ಜಯಂತಿ ಅಂಗವಾಗಿ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ
ಬೃಹತ್ ಶೌರ್ಯ ಸಂಚಲನಾ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದರು.
ಹಿಂದುಗಳ ರಕ್ಷಣೆಗೆ ಉತ್ತಮ ನಾಯಕರ ಅಗತ್ಯವಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ದುಡಿಯುವ ಕಾರ್ಯಕರ್ತರ ರಕ್ಷಣೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಯತ್ನ ಶ್ಲಾಘನೀಯ. ಇದು ಇತರ ನಾಯಕರಿಗೂ ಮಾದರಿಯಾಗಬೇಕು. ಮನೆಮನೆಗಳಲ್ಲಿ ಧರ್ಮ ಜಾಗೃತಿ ಮೂಡಬೇಕು. ಲವ್ ಜೆಹಾದ್ ಬಲಿಯಾಗಬಾರದು ಎಂದರೆ ಹೆತ್ತವರು ತಮ್ಮ ಮಕ್ಕಳಿಗೆ ಸನಾತನ ಧರ್ಮದ ಕುರಿತು ಎಳವೆಯಲ್ಲಿಯೇ ಕಲಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಲೋಕಕಲ್ಯಾಣಕ್ಕಾಗಿ ನಡೆಸುತ್ತಿರುವ ಹೋರಾಟ ನಮ್ಮ ಧರ್ಮದ ಭದ್ರ ಬುನಾದಿಯಾಗಿದೆ.
ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್ ಮಠಾಧೀಶರಾದ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ,
ಕೆಲವೊಂದು ದ್ವಂದ್ವ ಗೊಂದಲಗಳಿಗೆ ನಮ್ಮ ಕಾನೂನುಗಳು ಕಾರಣವಾಗಿವೆ. ಕಾನೂನುಗಳು ರೂಡಿ ಸಂಪ್ರದಾಯದಿಂದ ರೂಪಿಸಲ್ಪಟ್ಟಿವೆ. ಬ್ರಿಟಿಷ್ ಕಾಲದ ಕಾನೂನುಗಳೆ ಈಗಲೂ ಚಾಲ್ತಿಯಲ್ಲಿದೆ. ಲೋಕಕಲ್ಯಾಣಕ್ಕಾಗಿ ಕಾನೂನು ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ. ರಾಷ್ಟ್ರದ ಸಂರಕ್ಷಣೆಗೆ ಯಾವುದೇ ಅಡ್ಡಿ ಉಂಟಾಗದಂತೆ ಬದಲಾವಣೆ ಉಂಟಾದರೆ ಲೋಕದಲ್ಲಿ ನಡೆಯುತ್ತಿರುವ ಧರ್ಮಗಳನ್ನು ಸರಿದಾರಿಗೆ ತರಲು ಸಾಧ್ಯವಿದೆ. ನಮ್ಮ ಧರ್ಮವನ್ನು ಎತ್ತಿ ಹಿಡಿಯುವ ಶಕ್ತಿ ಮೂಡಬೇಕು. ಹೆಜ್ಜೆಹೆಜ್ಜೆಗೂ ತೊಂದರೆ ನೀಡುತ್ತಿರುವ ರಾಜಕೀಯ ದ್ವೇಷ ಬದಿಗಿಟ್ಟು ರಾಷ್ಟ್ರ ನಿರ್ಮಾಣದ ಸಂಕಲ್ಪ ಮಾಡಬೇಕು. ಧರ್ಮವನ್ನು ಸರಿಯಾಗಿ ಪಾಲಿಸಿದರೆ ಸುಖಿ ಸಮಾಜ ನಿರ್ಮಾಣವಾಗುತ್ತದೆ. ಗೋವಿನ ರಕ್ಷಣೆ, ಸನಾತನ ಹಿಂದೂ ಧರ್ಮದ ರಕ್ಷಣೆ ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ಶ್ರೀಗಳು ಕಲ್ಮಂಜದಲ್ಲಿ ಗೋಗ್ರಾಮ ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.
ಕಾರ್ಯಕ್ರಮ ಕ್ಕೂ ಮೊದಲು ಭಾರತಮಾತೆ ಭಾವಚಿತ್ರಕ್ಕೆ ಹಾಗೂ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೇನೆಯ ಜನರಲ್ ರಾವತ್ ಸಹಿತ 12 ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೆಳ್ತಂಗಡಿಯ ಉದ್ಯಮಿ ರಾಗ್ನೇಶ್ ವಹಿಸಿದ್ದರು.
ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ತಾಲೂಕು ಅಧ್ಯಕ್ಷ ಸಂತೋಷ್ ಅತ್ತಾಜೆ, ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ವಿಹಿಂಪ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ ಉಪಸ್ಥಿತರಿದ್ದರು. ಜಗದೀಶ್ ಕನ್ನಾಜೆ ಕಾರ್ಯಕ್ರಮ ನಿರ್ವಹಿಸಿದರು. ವಿಹಿಂಪ ತಾಲೂಕು ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ವಂದಿಸಿದರು.