ಬೆಳ್ತಂಗಡಿ: ಭಾರೀ ಚರ್ಚೆಗೆ ಎಡೆಮಾಡಿದ್ದ ವೇಣೂರು ಸನಿಹದ ಕರಿಮಣೇಲು ಗ್ರಾಮದಲ್ಲಿನ ಬಹು ಅಪೂರ್ವ ಸಸ್ಯಸಂಕುಲ ಶ್ರೀತಾಳೆಯ ಸಂರಕ್ಷಣೆ ಕೊನಗೂ ಸಾಧ್ಯವಾಗಲಿಲ್ಲ. ಗುರುವಾರ ದುರುಳರು ಈ ಮರ ಧರೆಗುರುಳಿಸಿದ್ದು, ಮೌಢ್ಯಕ್ಕೆ ಬಲಿಯಾಯಿತೇ ಎಂಬ ಪ್ರಶ್ನೆ ವ್ಯಾಪಕವಾಗಿ ಜನರನ್ನು ಕಾಡತೊಡಗಿದೆ.
ಶ್ರೀತಾಳೆ ಮರ ಹೂ ಬಿಟ್ಟರೆ ಮನೆ ಯಜಮಾನನಿಗೆ ಹಾಗೂ ಊರಿಗೆ ಹಾನಿಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನ.೨೧ರಂದು ವಿವಿಧ ಪೂಜಾವಿಧಿಗಳನ್ನು ನೆರವೇರಿಸಿ ಶ್ರೀತಾಳೆಯನ್ನು ಕಡಿಯಲು ನಿರ್ಧರಿಸಲಾಗಿತ್ತು. ಈ ವಿಷಯ ವ್ಯಾಪಕ ಚರ್ಚೆಯಾಗಿ ಆಕ್ಷೇಪ ವ್ಯಕ್ತವಾಗಿತ್ತು. ಮರ ಪ್ರಬೇಧಗಳಲ್ಲಿ ಪಾವಿತ್ರ್ಯದ ಸಂಕೇತ ಎಂದು ನಂಬಲಾಗಿದ್ದ ಈ ಶ್ರೀತಾಳೆ ಮರವನ್ನು ರಕ್ಷಿಸುವಂತೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಮೂಡಬಿದಿರೆ ಜೈನಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಜನರಲ್ಲಿ ಅರಿವು ಮೂಡಿಸಬೇಕು ಎಂದಿದ್ದರು. ಕರಿಮಣೇಲು ಜಾಗದ ಮಾಲಿಕರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದ ಅವರು ಮರವನ್ನು ಕಡಿಯದಿರುವಂತೆ ವಿನಂತಿಸಿದ್ದರು. ಅಲ್ಲದೇ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದು ಮರವನ್ನು ಸಂರಕ್ಷಿಸುವಂತೆ ಆಗ್ರಹಿಸಿದ್ದರು.