ಬಂಟ್ವಾಳ : ಶೈಕ್ಷಣಿಕ ವರ್ಷದ ಕೊನೇ ಹಂತದಲ್ಲಿ ಬೇಸಿಗೆ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ಕಲೆಯ ವಿವಿಧ ಸಾಧ್ಯತೆ ಗಳನ್ನು ನೀಡುವುದನ್ನು ನಾವು ಕಂಡಿದ್ದೇವೆ, ಆದರೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರ್ಕಾರಿ ಶಾಲೆಯಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಅಡಿಕೆ ಸಿಪ್ಪೆ ಸುಲಿಯುವ ವಿಶೇಷ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ವೀರಕಂಭ ಗ್ರಾಮದ ಮಜಿ ಶಾಲೆಯಲ್ಲಿ ಅಡಿಕೆ ತೋಟವಿದ್ದು, ಶಾಲೆಯ ಆದಾಯಕ್ಕೆ ಪೂರಕ ನೆರವಾಗುತ್ತಾ ಬಂದಿದೆ. ಶಾಲಾ ಶಿಕ್ಷಕ ವೃಂದ ಮಕ್ಕಳಿಗೆ ಪಠ್ಯ ಶಿಕ್ಷಣ ಸಹಿತ ಕೃಷಿಯ ವಿಚಾರಧಾರೆಗಳನ್ನು ನೀಡುತ್ತಾ ಬಂದಿದ್ದು, ಮಕ್ಕಳಲ್ಲಿ ಕೃಷಿಯತ್ತ ಒಲವು ಮೂಡಿಸುವ ಕಾರ್ಯ ಮಾಡುತ್ತಿದೆ.
ಶಾಲಾ ಅಡಿಕೆ ತೋಟದಲ್ಲಿ ಬೆಳೆದ ಅಡಿಕೆ ಮರದಿಂದ ಬಿದ್ದ ಅಡಿಕೆಗಳನ್ನು ಸಂಗ್ರಹಿಸುವುದರಿಂದ ತೊಡಗಿ, ಅಡಿಕೆ ಒಣಗಿಸುವುದು ಹಾಗೂ ಅಡಿಕೆಯ ಸಿಪ್ಪೆ ಸುಲಿಯುವ ಕುರಿತಾಗಿ ಅನುಭವಿ ಕೃಷಿಕರಿಂದ ವಿದ್ಯಾರ್ಥಿಗಳಿಗೂ ತರಬೇತಿ ಆಯೋಜಿಸಿ ಗಮನ ಸೆಳೆದಿದೆ.
ಶಾಲಾ ಎಸ್.ಡಿ.ಎಂ.ಸಿ ಸದಸ್ಯ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ದಿವಾನ ರವರಿಂದ ಅಡಿಕೆ ಸುಲಿಯುವ ವಿಶೇಷ ಪ್ರಾತ್ಯಕ್ಷಿಕೆಯನ್ನೂ ಏರ್ಪಡಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಮುಖ್ಯಶಿಕ್ಷಕ ನಾರಾಯಣ ಪೂಜಾರಿ, ಶಾಲಾ ಶಿಕ್ಷಕಿಯರು ,ಮಕ್ಕಳ ಪೋಷಕರು ಉಪಸ್ಥಿತರಿದ್ದು, ಮಕ್ಕಳಿಗೆ ಪ್ರೇರಣೆಯಾದರು.