ಬಂಟ್ವಾಳ : ಕೊರೊನಾ ಸಂಕಷ್ಟದ ದಿನಗಳಲ್ಲಿ ತೆರಿಗೆ ಪರಿಷ್ಕರಣೆ ಮಾಡದೆ ಮುಂದೂಡುವಂತೆ ಇಂದು ನಡೆದ ಪುರಸಭಾ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದಲ್ಲದೆ ಈ ಬಗ್ಗೆ ತೀರ್ಮಾನ ಕೈಗೊಂಡು ಸರಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯ ಮಾಡಿದರು.
ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಮಾ.28 ರಂದು ಸೋಮವಾರ ಪುರಸಭಾ ಇಲಾಖೆಯಲ್ಲಿ ಸಭೆ ನಡೆಯಿತು.
ಗ್ರಾ.ಪಂ.ನಿಂದ ಹಿಡಿದು ಶಾಸಕರ ವರೆಗೆ ಗೌರವ ಧನ ಹೆಚ್ಚಳಮಾಡುತ್ತಿದ್ದಾರೆ, ಆದರೆ ಪಟ್ಟಣ ಪಂಚಾಯತ್ ಹಾಗೂ ಪುರಸಭೆಯ ಸದಸ್ಯರ ಗೌರವ ಧನವನ್ನು ಸರಕಾರದಿಂದ 10 ಸಾವಿರಕ್ಕೆ ಹೆಚ್ಚಳ ಮಾಡುವಂತೆ, ಪಿಂಚಣಿ ಹಾಗೂ ಜೀವವಿಮೆಯನ್ನು ನೀಡುವಂತೆ ಸರಕಾರಕ್ಕೆ ಪತ್ರಬರೆಯುವಂತೆ ಸದಸ್ಯ ವಾಸುಪೂಜಾರಿ ಸಭೆಯ ಅಧ್ಯಕ್ಷ ರ ಗಮನಕ್ಕೆ ತಂದರು.
ಕೊರೊನಾ ಸಂಕಷ್ಟದ ನೆಪವೊಡ್ಡಿ ತೆರಿಗೆ ಜಾಸ್ತಿ ಮಾಡದಂತೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ, ಹಾಗಿರುವಾಗ ನಾವು ಹೇಗೆ ಗೌರವ ಧನ ಹೆಚ್ಚಳ ಮಾಡುವಂತೆ ಕೇಳುವುದು, ಅದರ ಬದಲಾಗಿ ನಮ್ಮ ನಮ್ಮ ವಾರ್ಡ್ ಗಳಿಗೆ ಅನುದಾನ ಜಾಸ್ತಿ ಕೇಳಿದರೆ ನಮ್ಮ ಗೌರವ ಜಾಸ್ತಿ ಯಾಗುತ್ತದೆ ಎಂದು ಸದಸ್ಯ ಪುರಸಭಾ ಸದಸ್ಯ ಹರಿಪ್ರಸಾದ್ ಹೇಳಿದರು.
ಕಸ ಬಿಸಾಡುವುದನ್ನು ತಪ್ಪಿಸುವ ಸಲುವಾಗಿ ಪುರಸಭಾ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 25 ಸಿ.ಸಿ.ಕ್ಯಾಮರಾ ಅಳವಡಿಸಲಾಗಿದ್ದು, ಇನ್ನು 2 ಸಿ.ಸಿ.ಕ್ಯಾಮರಾ ಗಳನ್ನು ಅಳವಡಿಸಲಾಗುವುದು ಎಂದು ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದರು. ಇದೇ ವೇಳೆ ಉಪಯೋಗಕ್ಕೆ ಬಾರದ ಸಿ.ಸಿ.ಕ್ಯಾಮರಾ ಅಳವಡಿಸಿದ್ದು ಯಾಕೆ? ಎಂದು ಸದಸ್ಯ ಅಬುಬಕ್ಕರ್ ಸಿದ್ದೀಕ್ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಸಿ.ಕ್ಯಾಮರಾ ಅಳವಡಿಸಲಾಗಿರುವ ಸ್ಥಳದಲ್ಲಿ ಯೇ ಕಸ ತಂದು ಹಾಕುತ್ತಾರೆ, ಅಂತಹವರ ಮೇಲೆ ಗರಿಷ್ಠ ಪ್ರಮಾಣದ ದಂಡ ವಿಧಿಸುವಂತೆ ಸಭೆಯಲ್ಲಿ ಸದಸ್ಯರು ಒತ್ತಾಯ ಮಾಡಿದರು.
ಗ್ರಾ.ಪಂ.ವ್ಯಾಪ್ತಿಯ ಜನರು ಪುರಸಭಾ ವ್ಯಾಪ್ತಿಗೆ ಕಸ ತಂದು ಹಾಕುತ್ತಿದ್ದು, ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಭೆಯಲ್ಲಿ ಒತ್ತಾಯ ಮಾಡಿದರು. ಈ ಬಗ್ಗೆ ವಿಶೇಷ ಹರಿಸಿ ತಡೆಗೆ ಕ್ರಮಕೈಗೊಳ್ಳುವುದು ಎಂದು ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ವಿಶ್ವಾಸ ವ್ಯಕ್ತಪಡಿಸಿದರು. ಪುರಸಭಾ ಉಪಾಧ್ಯಕ್ಷೆ ಜೆಸಿಂತಾ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉಪಸ್ಥಿತರಿದ್ದರು.