ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಶ್ರಮಿಕ ಉದ್ಯೋಗ ಮೇಳ ರಾಜ್ಯದ ಎಲ್ಲಾ ಶಾಸಕರುಗಳಿಗೆ ಮಾದರಿಯಾಗಿದ್ದು ಎಲ್ಲಾ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಿ ಇದೇ ಮಾದರಿಯ ಉದ್ಯೋಗ ಮೇಳವನ್ನು ಮಾಡಿದಾಗ ಗ್ರಾಮೀಣ ವಿದ್ಯಾರ್ಥಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವಾ ಹೇಳಿದ್ದಾರೆ.
ಅವರು ಶುಕ್ರವಾರ ಮಡಂತ್ಯಾರ್ ಸೇಕ್ರೇಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ತಾಲೂಕಿನ ಯುವಜನತೆಗೆ ಹಮ್ಮಿಕೊಂಡಿದ್ದ ಶ್ರಮಿಕಾ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲವನ್ನು ಅರ್ಥಮಾಡಿಕೊಂಡು ಯುವಶಕ್ತಿಗೆ ದಾರಿಮಾಡಿಕೊಡುವ ಕಾರ್ಯಶ್ರೇಷ್ಠವಾದುದು. ವಿದ್ಯಾರ್ಥಿಗಳೆಂಬ ಸಂಪತ್ತನ್ನು ಸಂಪನ್ಮೂಲಗಳನ್ನಾಗಿ ಮಾಡಬೇಕು. ವಿದ್ಯಾರ್ಥಿಗಳು ಕೂಡ ತಮ್ಮಲ್ಲಿರುವ ಸಂಪತ್ತನ್ನು ಮೊದಲು ಅರಿಯಬೇಕು.
ಇಂದು
ರಾಜ್ಯದಲ್ಲಿ ಹನ್ನೊಂದು ಕೋಟಿಗೂ ಅಧಿಕ ವಿದ್ಯಾರ್ಥಿ ಸಂಪತ್ತುಗಳಿದ್ದು ಇವರ ಭವಿಷ್ಯವನ್ನು ರೂಪಿಸುವ ಜವಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ. ಆದರೆ ಇಂತಹ ಉದ್ಯೋಗ ಮೇಳವನ್ನು ನಡೆಸುವುದನ್ನು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಅತ್ಯಂತ ಜವಾಬ್ದಾರಿಯಿಂದ ಪಡೆಯಬೇಕು. ತಮ್ಮಲ್ಲಿರುವ ಸಂಪತ್ತನ್ನು ಗುರುತಿಸಿ ಅದನ್ನು ಮೇಲಕ್ಕೆ ತರುವ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ. ಇಂದು ಅನೇಕ ವಿದ್ಯಾರ್ಥಿಗಳು ಅನಗತ್ಯ ವಿಷಯಗಳ ಬಗ್ಗೆ ಮೊಬೈಲ್ಗಳಲ್ಲಿ ಆಟ ಆಡಿ ತಮ್ಮ ಜೀವನವನ್ನು ಹಾಳುಮಾಡುತ್ತಿದ್ದಾರೆ. ಅಗತ್ಯಕ್ಕೆ ತಕ್ಕ ಮೊಬೈಲ್ನ್ನು ಬಳಸಿ ನಿಮ್ಮ ಜೀವನವನ್ನು ಭದ್ರಪಡಿಸುವ ಮೂಲಕ ಪೋಷಕರಿಗೆ, ಇಡೀ ರಾಜ್ಯಕ್ಕೆ , ದೇಶಕ್ಕೆ ಗೌರವ ತರುವ ಕಾರ್ಯವನ್ನು ಮಾಡಿ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಇಚ್ಚಾಕ್ತಿ ಇದ್ದರೆ ಪಟ್ಟಣದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡಲು ಯಾವುದೇ ಭಯವಿರುವುದಿಲ್ಲ ಎಂದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಇಂದಿನ ಉದ್ಯೋಗ ಮೇಳ ತಾಲೂಕಿನ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಇದುವರೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು , ಯುವಜನಾಂಗ ಬೆಂಗಳೂರಿನಲ್ಲಿ ಕಂಪೆನಿಗಳ ಬಾಗಿಲು ಬಡಿಯಲು ಹೋಗುವ ಕಾಲವಿತ್ತು. ಇಂದು ಶ್ರಮಿಕ ಉದ್ಯೋಗ ಮೇಳದ ಮೂಲಕ ಬೃಹತ್ ಕಂಪೆನಿಗಳೇ ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಉದ್ಯೋಗ ನೀಡಲು ಅವರ ಬಳಿಯೇ ಬಂದಿದೆ. ತಾಲೂಕಿನ ಯುವ ಜನತೆಗೆ ಉದ್ಯೋಗ ನೀಡಲು ಈ ಉದ್ಯೋಗ ಮೇಳ ಮಾಡಿದ್ದು ಮುಂದಿನ ದಿನಗಳಲ್ಲಿ ಪ್ರತೀವರ್ಷ ಉದ್ಯೋಗ ಮೇಳ ಮಾಡಲಾಗುವುದು ಈ ಮೂಲಕ ಯುವಜನತೆ ತಮ್ಮ ಕುಟುಂಬಗಳಿಗೆ ಆಧಾರಸ್ಥಂಭವಾಗಬೇಕು ಎಂದರು.
ಒಟ್ಟು ೮೭ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿರುವುದು ತಾಲೂಕಿನ ಇತಿಹಾಸದಲ್ಲೇ ಪ್ರಥಮ ಎಂದರು.
ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ. ಫಾ. ಬೆಸಿಲ್ ವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಪಡೆಯಲು ಉತ್ಸುಕರಾಗಿರಬೇಕು. ಸಿಕ್ಕಿದ ಉದ್ಯೋಗದಲ್ಲಿ ಕೆಲಸದ ಸಮಯವನ್ನು ನೋಡದೇ ಕೆಲಸದ ಪರಿಣಾಮ ಮತ್ತು ಯಶಸ್ಸಿನ ಕಡೆ ಗಮನಹರಿಸಿದಾಗ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಯಂತ್ ಕೋಟ್ಯಾನ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ ಗುರುವಾಯನಕೆರೆ, ವಾಣಿ ಆಂಗ್ಲ ಮಾದ್ಯಮ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ಮಡಂತ್ಯಾರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲಿಯೋ ರೋಡ್ರಿಗಸ್, ಸೇಕ್ರೆಡ್ ಹಾಟ್ ಪಿ.ಯು. ಕಾಲೇಜಿನ ಉಪಪ್ರಾಚಾರ್ಯ ಲಿಯೋ ನೊರೊನ್ಹಾ, ಗಾಡನ್ ಏಂಜಲ್ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯಿನಿ ಜೆಸಿಂತ ಲೋಬೋ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮಶಾಲೆಯ ಮುಖ್ಯೋಪಾಧ್ಯಾಯ ರೆ|ಫಾ| ದೀಪಕ್ ಡೇಸಾ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕನ್ನಡ ಮಾಧ್ಯಮಶಾಲೆಯ ಮುಖ್ಯೋಪಾದ್ಯಾಯ ಮೋಹನ್ ನಾಯ್ಕ್ ಉಪಸ್ಥಿತರಿದ್ದರು.
ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಚಾರ್ಯ ಜೋಸೆಫ್ ಎಂ.ಎನ್ ಸ್ವಾಗತಿಸಿದರು.ಕಾಲೇಜಿನ ಉಪನ್ಯಾಸಕ ನೆಲ್ಸನ್ ಮೋನೀಸ್ ಕಾರ್ಯಕ್ರಮ ನಿರೂಪಿಸಿದರು.