ಬೆಳ್ತಂಗಡಿ: ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಜೆಗಳ ಅನುಕೂಲಕ್ಕೊಸ್ಕರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ ಅವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವುದೇ ಇಲ್ಲ ಎನ್ನುವುದು ಹಲವರ ದೂರು.
ಯೋಜನೆಗಳು ವ್ಯಕ್ತಿಗಳಿಗೆ ತಲುಪಿದೆಯೇ ಇಲ್ಲವೇ ? ತಲುಪಿದ್ದರೆ ಅದರ ಸದುಪಯೋಗವಾಗುತ್ತಿದೆಯೇ, ತಲುಪಿಲ್ಲದಿದ್ದಲ್ಲಿ ಯಾಕೆ ತಲುಪಿಲ್ಲ ಮತ್ತು ತಲುಪಿಸುವ ಬಗೆ ಹೇಗೆ ಎಂಬುದನ್ನು ತಿಳಿಯಲು ಇಲ್ಲೊಬ್ಬ ಗ್ರಾಮ ಪಂಚಾಯತಿ ಸದಸ್ಯ ವಿನೂತನ ವಿಧಾನವನ್ನು ಕಂಡು ಹುಡುಕಿ ಕಾರ್ಯತತ್ಪರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತಿಯ ಒಂದನೇ ವಾರ್ಡ್ನ ಸದಸ್ಯ ಪ್ರಸಾದ ಶೆಟ್ಟಿ ಏಣಿಂಜೆ ಅವರು ತಾವೇ ರೂಪಿಸಿಕೊಂಡ “ನನ್ನ ವಾರ್ಡ್ ನನ್ನ ಮಾಹಿತಿ” ಎಂಬ ಪರಿಕಲ್ಪನೆಯಲ್ಲಿ ಒಂದು ಕೋಷ್ಠಕವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದನ್ನು ತನ್ನ ವಾರ್ಡಿನ ಪ್ರತಿ ಮನೆಗೆ ಭೇಟಿ ನೀಡಿ ವಿವರಗಳನ್ನು ಭರ್ತಿ ಮಾಡಿಕೊಳ್ಳುತ್ತಾರೆ. ಸರಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿಲ್ಲದಿದ್ದರೆ, ತಲುಪಿಸುವ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ.
ಕೋಷ್ಠಕದಲ್ಲಿ ವಾರ್ಡ್ನಲ್ಲಿ ವಾಸಿಸುತ್ತಿರುವವರ ಹೆಸರನ್ನು ಬರೆದು ಅವರ ವಯಸ್ಸು, ದೂರವಾಣಿ ಸಂಖ್ಯೆ, ಉದ್ಯೋಗದ ಮಾಹಿತಿಯನ್ನು ತುಂಬಿಸಲಾಗುತ್ತದೆ. ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಆಯುಷ್ಮಾನ್ ಕಾರ್ಡ್, ಕಿಸಾನ್ ಕಾರ್ಡ್, ಉದ್ಯೋಗ ಖಾತರಿ ಕಾರ್ಡ್, ಕಟ್ಟಡ ಕಾರ್ಮಿಕ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ ಖಾತೆ, ವೃದ್ಧಾಪ್ಯ ವೇತನ, ಹಿರಿಯ ನಾಗರಿಕ ಕಾರ್ಡ್, ವಿಧವಾ ವೇತನ, ಅಡುಗೆ ಅನಿಲ, ಶೌಚಾಲಯ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಂಡು ಭರ್ತಿ ಮಾಡಲಾಗುತ್ತದೆ. ಸಾಮಾನ್ಯ, ಪ.ಜಾ., ಪ.ಪಂ.,ಅಲ್ಪಸಂಖ್ಯಾತ, ಇತ್ಯಾದಿ ಮಾಹಿತಿಗಳನ್ನೂ ಭರ್ತಿ ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ವಿವರಗಳಿಗೂ ಅವಕಾಶ ನೀಡಲಾಗಿದೆ. ಇದಕ್ಕಾಗಿ ಅವರು ಶನಿವಾರ ಮತ್ತು ಭಾನುವಾರ ತನ್ನ ಸಹಕಾರಿ ಮಿತ್ರರೊಂದಿಗೆ ಪ್ರತಿ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
ನಾವು ಓಟು ಕೇಳಲು ಮಾತ್ರ ಮನೆ ಭೇಟಿ ಮಾಡಿರುತ್ತೇವೆ. ಗೆದ್ದ ಬಳಿಕ ವಾರ್ಡ್ನಲ್ಲಿ ಏನೆಲ್ಲಾ ಆಗಬೇಕು ಎಂಬುದರ ಬಗ್ಗೆ ಚಿಂತನೆಯೇ ಮಾಡುವುದಿಲ್ಲಾ. ಆದರೆ ನಾನು ಮಾತ್ರ ಮತ್ತೆ ಮತ್ತೆ ನನ್ನ ವಾರ್ಡ್ಗೆ ಭೇಟಿ ನೀಡುತ್ತಿದ್ದೇನೆ. ನನ್ನ ವಾರ್ಡ್ ನನ್ನ ಮಾಹಿತಿಯು ನನ್ನದೇ ಸ್ವಂತ ಚಿಂತನೆಯಾಗಿದ್ದು ಜನರ ಸಂಕಷ್ಟಗಳನ್ನು ಅರಿಯಲು ಸಹಕಾರಿಯಾಗಿದೆ. ಈಗಾಗಲೇ ಸುಮಾರು 50 ಮನೆಗಳನ್ನು ಭೇಟಿ ಮಾಡಿ ಮಾಹಿತಿಗಳನ್ನು ಕಲೆ ಹಾಕಿದ್ದೇನೆ ಎನ್ನುತ್ತಾರೆ ಪತ್ರಕರ್ತರೂ ಆಗಿರುವ ಪ್ರಸಾದ್ ಶೆಟ್ಟಿ ಅವರು.
ಸರಕಾರದ ಹಲವಾರು ಯೋಜನೆಗಳು ಗ್ರಾಮ ಪಂಚಾಯತಿ ಕಚೇರಿಯವರೆಗೆ ಹೋಗಿರುತ್ತದೆ. ಅಲ್ಲಿಂದ ಗ್ರಾಮಕ್ಕೆ ತಲುಪಿರದ ನಿದರ್ಶನಗಳೂ ಸಾಕಷ್ಟು ಇರುವಾಗ ಮತ್ತು ಯೋಜನೆಗಳ ಬಗ್ಗೆ ಜನರಿಗೆ ಅರಿವೇ ಇಲ್ಲದಿರುವುದೂ ಉಂಟು. ಹೀಗಿರುವಾಗ ಪ್ರಸಾದ್ ಅವರ ಚಿಂತನೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂದು ಕಾದುನೋಡಬೇಕಾಗಿದೆ. ಅವರ ಈ ಪ್ರಯತ್ನ ಯಶಸ್ವಿಯಾದರೆ ರಾಜ್ಯಕ್ಕೇ ಮಾದರಿಯಾಗುವುದರಲ್ಲಿ ಸಂಶಯವಿಲ್ಲ.
ಜನರ ನಿರೀಕ್ಷೆ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕೊಸ್ಕರ ನನ್ನ ವಾರ್ಡ್ ನನ್ನ ಮಾಹಿತಿ ಎಂಬ ಕಾರ್ಯಕ್ರಮದ ಮೂಲಕ ಮಾಡುತ್ತಿದ್ದೇನೆ. ಗ್ರಾಮೀಣ ಭಾಗದಲ್ಲಿ ಇರುವ ನಮಗೆ ಸರಕಾರದ ಹಲವು ಮಾಹಿತಿಗಳು, ಸೌಲಭ್ಯಗಳು ಹಾಗು ಇತರ ಯೋಜನೆಗಳು ಮನೆ ಮನೆಗೆ ಮುಟ್ಟಿಸಬೇಕು ಎಂಬ ಮಹದಾಸೆ ನನ್ನದು- ಪ್ರಸಾದ ಶೆಟ್ಟಿ ಏಣಿಂಜೆ