ಬೆಳ್ತಂಗಡಿ: ಎರಡು ವರ್ಷ ದೇಶ ಹಾಗೂ ಜಗತ್ತು ಅನುಭವಿಸಿರುವ ಕೋವಿಡ್ ಕಹಿ ಘಟನೆಯಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ನೆರವಾಗುವ ದೃಷ್ಟಿಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಧನಸಹಾಯ ಒದಗಿಸುವ ಮೂಲಕ ಕುಟುಂಬ ಸಾಲದ ಭಾರವನ್ನು ಇಳಿಸಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ಸೋಂಕಿನಿಂದ ಮೃತರಾದ ರೋಗಿಯ ಕುಟುಂಬಕ್ಕೆ ಡಿ.20 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಧನಾದೇಶವನ್ನು (ಚೆಕ್) ವಿತರಿಸಿ ಮಾತನಾಡಿದರು.
ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಯಡಿಯೂರಪ್ಪ ನೇತೃತ್ವದ ಸರಕಾರವು ದೇಶದಲ್ಲೆ ಮೊದಲಬಾರಿಗೆ ಈ ಚಿಂತನೆ ಮಾಡಿದ ಸರಕಾರವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲೂ ಮೊದಲ ಅಲೆಯಲ್ಲಿ 45 ಸಾವಿರ ಆಹಾರ ಕಿಟ್ ವಿತರಿಸುವ ಕೆಲಸವಾಗಿದ್ದು, ಎರಡನೇ ಅಲೆಯಲ್ಲಿ ಆಂಬುಲೆನ್ಸ್, ಔಷಧ, ಆಕ್ಸಿಜನ್, ಸ್ವಾನ್ ಕಲೆಕ್ಷನ್ ಸೇರಿದಂತೆ ಪ್ರತಿ ಹಂತದಲ್ಲೂ ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಹೇಳಿದರು.
ಕೋವಿಡ್ ನಿಂದ ಮೃತಪಟ್ಟ ಸದಸ್ಯನ ಕುಟುಂಬ ಎಪಿಎಲ್ ಕಾರ್ಡ್ ಹೊಂದಿದ್ದವರಿಗೆ ಕೇಂದ್ರದಿಂದ 50 ಸಾವಿರ ರೂ. ಬಿಪಿಎಲ್ ಕಾರ್ಡ್ ದಾರರಿಗೆ ರಾಜ್ಯದಿಂದ 1 ಲಕ್ಷ ರೂ, ಕೇಂದ್ರದ 50 ಸಾವಿರ ರೂ. ಸೇರಿ 1.50 ಲಕ್ಷ ರೂ. ಕೈಸೇರಲಿದೆ ಎಂದರು.
ಕೋವಿಡ್ ನಿಂದ ಮೃತಪಟ್ಟ ಬೆಳ್ತಂಗಡಿ ತಾಲೂಕಿನ ಕುಟುಂಬಕ್ಕೆ ಶಾಸಕನ ನೆಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ಮೊತ್ತದಂತೆ ತಲಾ 10,000 ರೂ. ವಿತರಣೆ ಕಾರ್ಯಕ್ರಮ ಒಂದು ಹಂತದಲ್ಲಾಗಿದ್ದು ವಿಧಾನ ಸಭಾ ಅಧಿವೇಶನ ಬಳಿಕ ಎಲ್ಲರಿಗೂ ವಿತರಿಸುವ ಕಾರ್ಯವಾಗಲಿದೆ ಎಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಮೃತಪಟ್ಟ 60 ಮಂದಿಯ ಕುಟುಂಬಕ್ಕೆ ರಾಜ್ಯ ಸರಕಾರದ ತಲಾ 1 ಲಕ್ಷ ರೂ.ನ ಚೆಕ್ ನ್ನು ಶಾಸಕರು ವಿತರಿಸಿದರು. 20 ಮಂದಿಗೆ 94ಸಿ ಹಕ್ಕು ಪತ್ರವನ್ನು ವಿತರಿಸಲಾಯಿತು. ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಹೊರತುಪಡಿಸಿ ಬೆಳ್ತಂಗಡಿ ಕ್ಷೇತ್ರದಿಂದ ಚೆಕ್ ವಿತರಿಸುವ ಕಾರ್ಯವಾಗಿದೆ ಎಂದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ.ಪಂ. ಅಧ್ಯಕ್ಷೆ ರಜನಿಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ತಾಲೂಕು ಆರೋಗ್ಯಧಿಕಾರಿ ಡಾ.ಕಲಾಮಧು, ತಹಶೀಲ್ದಾರ್ ಮಹೇಶ್ ಜೆ., ಇಒ ಕುಸುಮಾಧರ್ ಉಪಸ್ಥಿತರಿದ್ದರು.