ಬೆಳ್ತಂಗಡಿ : ಉಜಿರೆಯಲ್ಲಿ ಜ.8 ಹಾಗೂ 9ರಂದು ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಮೂರನೇ ಅಧಿವೇಶನದ ಸ್ವಾಗತ ಸಮಿತಿಯ ಉದ್ಘಾಟನೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರಗಿತು.
ಸಮಿತಿಗೆ ಚಾಲನೆ ನೀಡಿ ಮಾತನಾಡಿದ, ಅಭಾಸಾಪದ ಉಪಾಧ್ಯಕ್ಷ ಎಸ್.ಜಿ. ಕೋಟಿ ಸಾಹಿತ್ಯದ ಸೃಷ್ಟಿ ಮತ್ತು ಅದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಅಧಿವೇಶನದ ಉದ್ದೇಶವಾಗಿದೆ. ವಿವಿಧ ಜಿಲ್ಲೆಗಳ ಸಾಹಿತ್ಯಾಭಿಮಾನಿಗಳು ಇದರಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸಾಹಿತ್ಯ ಅಭಿವೃದ್ಧಿ ಜತೆ ಅಭಾಸಾಪ ಸಮಾಜಮುಖಿ ಚಿಂತನೆಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ಮಾತನಾಡಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಇವುಗಳ ಸಹಕಾರದಲ್ಲಿ ಅಧಿವೇಶನ ಯಶಸ್ವಿಯಾಗಿ ಜರಗಲಿದೆ ಎಂದು ಹೇಳಿದರು.
ಅಭಾಸಾಪದ ಕಾರ್ಯದರ್ಶಿ ರಘುನಂದನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಅಭಾಸಾಪ ಸಾಹಿತ್ಯ ಕ್ಷೇತ್ರದ ಕೆಲಸದೊಂದಿಗೆ ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ದುಡಿಯುತ್ತಿದೆ. ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸಿರುವ ಉಜಿರೆಯಲ್ಲಿ ಅಧಿವೇಶನದ ಪೂರ್ವ ತಯಾರಿಗಳಿಗೆ ಸಾಕಷ್ಟು ಕಾರ್ಯಕರ್ತರು ಮುಂದಾಗಿರುವುದು ಸಂತಸದ ವಿಚಾರ ಎಂದು ಹೇಳಿದರು.
ಈ ವೇಳೆ ಅಧಿವೇಶನದ ಆಮಂತ್ರಣ ಪತ್ರಿಕೆ ಹಾಗೂ ಕರಪತ್ರ ಬಿಡುಗಡೆಗೊಳಿಸಲಾಯಿತು. ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಮುಖ್ಯಸ್ಥ ಹಾಗೂ ಇತರ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಧಿವೇಶನದ ಸಹಸಂಚಾಲಕ ಡಾ. ರವಿ ಎಂ.ಎನ್. ಸ್ವಾಗತಿಸಿದರು. ವಿದ್ಯಾಶ್ರೀ ಅಡೂರು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ವಂದಿಸಿದರು.
ಸ್ವಾಗತ ಸಮಿತಿ
ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಗೌರವ ಸಲಹೆಗಾರರಾಗಿ ಯು. ವಿಜಯರಾಘವ ಪಡ್ವೆಟ್ನಾಯ,ಡಿ. ಹರ್ಷೇಂದ್ರಕುಮಾರ್, ಧರ್ಮಸ್ಥಳ,ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ,ಡಾ.ಬಿ.ಯಶೋವರ್ಮ, ಅಧ್ಯಕ್ಷರಾಗಿ ಡಾ.ಎಂ.ಮೋಹನ್ ಆಳ್ವ, ಕಾರ್ಯಾಧ್ಯಕ್ಷರಾಗಿ ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಕೆ. ಹರೀಶ್,ಯು.ಶರತ್ ಕೃಷ್ಣ ಪಡ್ವೆಟ್ನಾಯ, ಕಿಶೋರ್ ಕೊಡ್ಗಿ, ಶಶಿಧರ ಶೆಟ್ಟಿ, ಸಂಚಾಲಕರಾಗಿ ಡಾ.ಮಾಧವ ಎಂ.ಕೆ, ಸಹ ಸಂಚಾಲಕರಾಗಿ ಡಾ.ರವಿ ಎಂ.ಎನ್, ಕಾರ್ಯದರ್ಶಿಯಾಗಿ ಪ್ರಕಾಶ್ ನಾರಾಯಣ,ಜತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ, ಕೋಶಾಧಿಕಾರಿ ಅತ್ತಾಜೆ ಕೇಶವಭಟ್ ಹಾಗೂ ಇತರ 41 ಮಂದಿ ಸದಸ್ಯರಿರುವ ಸ್ವಾಗತ ಸಮಿತಿಯನ್ನು ಘೋಷಿಸಲಾಯಿತು.