ಪುತ್ತೂರು: ವಿದ್ಯುತ್ ತಂತಿಯನ್ನು ಕಳವು ಮಾಡಿ ಗುಜಿರಿ ಅಂಗಡಿ ಮಾರಾಟ ಮಾಡಿದ ಆರೋಪಿಯನ್ನು ಪುತ್ತೂರು ಪೊಲೀಸರು ಮೇ 6ರಂದು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಅತ್ಕುರು ಗ್ರಾಮದ ಕುಂಪ್ಲಾಪುರ ಸಣ್ಣಪ್ಪ ಎಂಬವರ ಪುತ್ರ ಅಭಿಷೇಕ್ ಕೆ.ಎಸ್ (26ವ)ರವರು ಬಂಧಿತ ಆರೋಪಿ. ಕೇಂದ್ರ ಸರಕಾರದ ಯೋಜನೆಯಂತೆ ಬೆಂಗಳೂರಿನ ಅರವಿಂದ ಇಲೆಕ್ಟ್ರಿಕಲ್ ಪ್ರೊಜೆಕ್ಟ್ ಇಂಜಿನಿಯರ್ ಸಂಸ್ಥೆ ಹಳೆಯ ವಿದ್ಯುತ್ ತಂತಿಗಳ ಬದಲಾವಣೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡು ಪುತ್ತೂರಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ರೂ. 24ಸಾವಿರ ಮೌಲ್ಯದ ವಿದ್ಯುತ್ ತಂತಿಗಳು ಕಳವಾಗಿರುವ ಕುರಿತು ಸಂಸ್ಥೆಯ ಪ್ರೊಜೆಕ್ಟ್ ಇಂಜಿನಿಯರ್ ಪವನ್ ಗೌಡ ಅವರು ಮೇ 5ರಂದು ತಡ ರಾತ್ರಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಮೇ 6ರಂದು ಆರೋಪಿ ಅಭಿಷೇಕ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ನಡೆಸುತ್ತಿರುವ ಬೆಂಗಳೂರಿನ ಅರವಿಂದ ಇಲೆಕ್ಟ್ರಿಕಲ್ಸ್ ಸಂಸ್ಥೆ ಕಾಮಗಾರಿಗಾಗಿ ಪುತ್ತೂರಿನ ಪಡೀಲ್ ಮತ್ತು ಕರಿಯಾಳದಲ್ಲಿ ಎರಡು ಗೋಡಾನ್ ಮಾಡಿಕೊಂಡಿತ್ತು. ಮೇ 5ರಂದು ಪಡೀಲ್ ಗೋಡಾನ್ನಲ್ಲಿರುವ ಅಲ್ಯುಮಿನಿಯಂ ವಿದ್ಯುತ್ ತಂತಿಯನ್ನು ಕಂಪೆನಿಯ ಮುಖ್ಯಗೋಡಾನ್ ಇರುವ ಕರಿಯಾಳಕ್ಕೆ ಸಾಗಾಟ ಮಾಡಲು ಕಂಪೆನಿಯ ಲಾರಿ ಚಾಲಕ ಅಭಿಷೇಕ್ ಮತ್ತು ಪ್ರದೀಪ್ಗೆ ತಿಳಿಸಲಾಗಿತ್ತು. ಅದೇ ರೀತಿ ಲಾರಿ ಚಾಲಕ ಅಭಿಷೇಕ್ ಎಂಬವರು ಪಡೀಲ್ ಗೋಡಾನ್ನಿಂದ ತಂತಿಯನ್ನು ಲಾರಿಯಲ್ಲಿ ಲೊಡ್ ಮಾಡಿ ಸ್ವಲ್ಪದೂರ ಹೋಗಿ ಅಲ್ಲಿ ಪಿಕಾಪ್ ಜೀಪೊಂದನ್ನು ಗುರುತಿಸಿ ಅದರ ಮೂಲಕ ವಿದ್ಯುತ್ ತಂತಿಯನ್ನು ಗುಜಿರಿ ಅಂಗಡಿಗೆ ಮಾರಾಟ ಮಾಡಿದ್ದರು.
ಮುಖ್ಯ ಗೋಡಾನ್ನಲ್ಲಿ ರೂ. 24ಸಾವಿರ ಮೌಲ್ಯದ ವಿದ್ಯುತ್ ತಂತಿ ಕಡಿಮೆ ಇರುವುದನ್ನು ಗಮನಿಸಿದ ಕಂಪೆನಿಯ ಇಂಜಿನಿಯರ್ ಮೇ 5ರಂದು ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಲಾರಿ ಚಾಲಕನ ಮೇಲೆ ಸಂಶಯವಿದೆ ಎಂದು ತಿಳಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಅಭಿಷೇಕ್ ಎಂಬವರನ್ನು ಮೇ 6ರಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಬಂಧಿಸಿ ವಿಚಾರಿಸಿದರು. ವಿಚಾರಣೆ ವೇಳೆ ಸತ್ಯಾಂಶ ಬಾಯಿ ಬಿಟ್ಟ ಆರೋಪಿ ಕಳವು ಮಾಡಿದ ವಿದ್ಯುತ್ ತಂತಿಯನ್ನು ನೆಲ್ಲಿಕಟ್ಟೆ ಗುಜಿರಿ ಅಂಗಡಿಗೆ ಮಾರಾಟ ಮಾಡಿರುವ ಕುರಿತು ತಿಳಿಸಿದರು. ಪೊಲೀಸರು ಆರೋಪಿಯ ಸಮಕ್ಷಮದಲ್ಲಿ ಗುಜಿರಿಗೆ ಅಂಗಡಿಯ ಹೊರಗಿದ್ದ ವಿದ್ಯುತ್ ತಂತಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.