ಮಡಿಕೇರಿ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಕುತೂಹಲದಿಂದ ಕಾಯುತ್ತಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಆಯಸ್ಸು ಎಷ್ಟು ದಿನ ಎನ್ನುವ ಲೆಕ್ಕಾಚಾರವೂ ಆರಂಭಗೊಂಡಿದೆ.
ಈ ನಡುವೆ ರಾಜಕೀಯ ಲೆಕ್ಕ ಪಕ್ಕಾ ಮಾಡುವ ಚಾಣಾಕ್ಷತನ ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಢೀರ್ ಬೆಳವಣಿಗೆಯೊಂದರಲ್ಲಿ ಮಡಿಕೇರಿ ಸಮೀಪದ ರೆಸಾರ್ಟ್ವೊಂದರಲ್ಲಿ ತಂಗುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದಾರೆ.
ಮೇ 5 ರಂದೇ ಸಂಜೆ ರೆಸಾರ್ಟ್ ಪ್ರವೇಶಿಸಿರುವ ಸಿದ್ದು ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ಇವರೊಂದಿಗೆ ಪುತ್ರ ಯತೀಂದ್ರ ಹಾಗೂ ಇತರ ಆತ್ಮೀಯರು ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಮೇ 7 ರಂದು ರೆಸಾರ್ಟ್ನಿಂದ ಮರಳಲಿದ್ದಾರೆ ಎಂದು ಬಲ್ಲಮೂಲಗಳು ದೃಢಪಡಿಸಿವೆ.
ಮತ್ತೊಂದು ಮೂಲದ ಪ್ರಕಾರ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನವೇ ರೆಸಾರ್ಟ್ ಖಾಲಿ ಮಾಡಿದ್ದಾರೆ. ಮೇ 23 ರಂದು ಪ್ರಕಟಗೊಳ್ಳುವ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಮತ್ತು ಮುಂದೆ ಕಾಂಗ್ರೆಸ್ ತೆಗೆದುಕೊಳ್ಳಬಹುದಾದ ನಿಲುವುಗಳ ಬಗ್ಗೆ ಸಿದ್ದು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.