ಮಂಗಳೂರು: ಇದೇ 25ರಂದು ಇಲ್ಲಿನ ಗೋರಿಗುಡ್ಡ ನಿವಾಸಿಯಾದ ಮೆರ್ಲಿಕ್ ಅಂತೋನಿ ಡಿ ಸೋಜಾ ಹತ್ಯೆ ಪ್ರಕರಣ ಸಂಬಂಧಿಸಿದಂತೆ 6ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ 5 ಮಾರಕಾಸ್ತ್ರಗಳನ್ನು, ಎರಡು ಮೋಟಾರ್ ಬೈಕ್ ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಗೋರಿಗುಡ್ಡೆ, ವೆಲೆನ್ಸಿಯ ನಿವಾಸಿ ನಿಶಾಕ್ ಪೂಜಾರಿ(28),ಗೋರಿಗುಡ್ಡ ನೆಹರೂ ಕಂಪೌಂಡ್ ನ ವಿನೇಶ್ ಕುಮಾರ್(30), ಮುಳಿಹಿತ್ಲು ನಿವಾಸಿ ಸಚಿನ್ ಶೆಟ್ಟಿ(22), ಜೆಪ್ಪಿನ ಮೊಗರು ನಿವಾಸಿ ಗಣೇಶ್ ಕುಲಾಲ್(34), ಜೆಪ್ಪು ಕುಡ್ಪಾಡಿ ನಿವಾಸಿ ಸಂದೀಪ್ ಶೆಟ್ಟಿ(33) ಹಾಗೂ ಗೋರಿಗುಡ್ಡೆ ನಿವಾಸಿ ಪ್ರವೀಣ್ ಪೂಜಾರಿ(42) ಎಂದು ಗುರುತಿಸಲಾಗಿದೆ.
ಹತ್ಯೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಹತ್ಯೆಗೆ ಕಾರಣ: ಆರೋಪಿ ನಿಶಾಕ್ ಪೂಜಾರಿ ಹಾಗೂ ಹತ್ಯೆಯಾದ ಮೆರ್ಲಿಕ್ ಅಂತೋನಿ ಡಿ ಸೋಜಾ ನಡುವೆ ಹಳೆಯ ದ್ವೇಷವಿರುತ್ತದೆ. ಈ ಹಿಂದೆ ಮಾರ್ನಮಿಕಟ್ಟೆ ಸಂದೀಪ್ ಶೆಟ್ಟಿಯನ್ನು ಕೊಲೆ ಮಾಡಲು ಹತ್ಯೆಯಾದ ಮೆರ್ಲಿಕ್ ಹಾಗೂ ಆತನ ಸಹಚರರು ಯತ್ನಿಸಿರುತ್ತಾರೆ. ಈ ದ್ವೇಷದಿಂದ ಮೆರ್ಲಿಕ್ ಅಂತೋನಿ ಡಿ ಸೋಜಾ ನನ್ನು ಮಾರಕಾಸ್ತ್ರಗಳಿಂದ ಕೊಲೆ ನಡೆಸಿರುವುದಾಗಿ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.
ಆರೋಪಿಗಳ ಪೈಕಿ ಪ್ರವೀಣ್ ಎಂಬಾತನ ಮೇಲೆ ಜೆಪ್ಪಿನಮೊಗರುವಿನಲ್ಲಿ ದೇವದಾಸ್ ಎಂಬವರ ಕೊಲೆ ಪ್ರಕರಣ, ಪಂಪ್ ವೆಲ್ ನಲ್ಲಿ ರಾಜಾ ಎಂಬಾತನ ಮೇಲೆ ಕೊಲೆ ಪ್ರಕರಣ, ವಿನೇಶ್ ಕುಮಾರ್ ಎಂಬಾತನ ಮೇಲೆ ಕೊಲೆ ಯತ್ನ ಪ್ರಕರಣ ಹಾಗೂ ಸಂದೀಪ್ ಶೆಟ್ಟಿಯ ಮೇಲೆ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿದ್ದು, ಆರೋಪಿ ಸಚಿನ್ ಹೊಟೇಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿ.
ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಾನ್ಯ ಪೊಲೀಸ್ ಆಯುಕ್ತರಾದ ಹನುಮಂತರಾಯ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಉಮಾ ಪ್ರಶಾಂತ್ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ಬೆಳ್ಳಿಯಪ್ಪ ಕೆ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಮಂಗಳೂರು ದಕ್ಷಿಣ ಠಾಣೆಯ ಪಿಎಸ್ಐ ರಾಜೇಂದ್ರ ಬಿ. ಮತ್ತು ಮಂಜುಳಾ ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ.