ಪುತ್ತೂರು: ಆ.5ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಪುತ್ತೂರು ನಗರಸಭೆ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸಂಭವಿಸಿದೆ.
ಶ್ರೀ ಮಹಾಲಿಂಗೇಶ್ವರ ಬಳಿಯಿಂದ ಹಾದು ಹೋಗುವ ರಾಜ ಕಾಲುವೆಯಲ್ಲಿ ನೀರು ಮೇಲ್ಮಟ್ಟದಲ್ಲಿ ಹರಿದ ಪರಿಣಾಮ ದೇವಳದ ಗದ್ದೆಯ ತೋಡಿನ ಬಳಿ ಇರುವ ಮನೆಗಳಿಗೆ ಮಳೆ ನೀರು ನುಗ್ಗಿದೆ.
ಎಪಿಎಂಸಿ ರಸ್ತೆಯ ಸಾಲ್ಮರ ಸೇತುವೆಯ ಬಳಿಯಿಂದ ನೀರಿನ ಒಳಹರಿವು ಹೆಚ್ಚಾದ ಪರಿಣಾಮ ಚರಂಡಿ ನೀರು ರಾಜ ಕಾಲುವೆಗೆ ಸೇರಲಾಗದೆ ನೀರು ಚರಂಡಿಯಿಂದ ಉಕ್ಕಿ ಆದರ್ಶ ಅಸ್ಪತ್ರೆಯ ಪರಿಸರದ ಹಲವು ಮನೆಗಳ ವಠಾರಗಳಿಗೆ ನುಗ್ಗಿದೆ.
ಕಾವೇರಿ ಕಟ್ಟೆ ಮತ್ತು ಬೊಳುವಾರು ಸಮೀಪ ಚರಂಡಿಯಿಲ್ಲದೆ ನೀರು ಮನೆಯೊಂದಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಆತಂಕದಿಂದ ಮನೆಮಂದಿ ಬೆಳಗ್ಗಿನ ತನಕ ಜಾಗರಣೆ ಮಾಡಿದ್ದಾರೆ. ರಾತ್ರಿ ಸುಮಾರು 12ರ ಸುಮಾರಿಗೆ ನೀರಿನ ಕೃತಕ ನೆರೆ ಆರಂಭಗೊಂಡಿದೆ. ಸುಮಾರು 3 ಗಂಟೆಯ ಸುಮಾರಿಗೆ ನೀರಿನ ಮಟ್ಟ ಕಡಿಮೆ ಆಗಿತ್ತಾದರೂ ಆ.6ರಂದು ಮುಂಜಾನೆ ಮತ್ತೆ ಕೃತಕ ನೆರೆ ಸೃಷ್ಟಿಯಾಗಿದೆ.