ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಮರುಕಳಿಸುತ್ತಿರುವ ಕೋಮು ಸಂಘರ್ಷದಿಂದಾಗಿ ಜಿಲ್ಲೆ ಬೂದಿ ಮುಚ್ಚಿದ ಕೆಂಡಂದಂತಾಗಿದೆ. ಜಿಲ್ಲೆಯಲ್ಲಿ ಶಾಶ್ವತ ಸಾಮರಸ್ಯಕ್ಕಾಗಿ ಡಿಸೆಂಬರ್ 12ರಂದು ಬಂಟ್ವಾಳದ ಫರಂಗಿಪೇಟೆಯಿಂದ ಮಾಣಿವರೆಗೆ ನಡೆಯುವ ಸಮಾನ ಮನಸ್ಕರ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಜಾತಿ ಮತ ಭೇದ ಮರೆತು ಜನ ಭಾಗವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ತಿಳಿಸಿದ್ದಾರೆ.
ಭಾನುವಾರ ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತೀಯ ಶಕ್ತಿಗಳು ಕಳೆದ 15 ವರ್ಷಗಳಿಂದ ಜಿಲ್ಲೆಯನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಬಂದಿರುವುದರಿಂದ ಒಂದು ಕೊಲೆಗೆ ಇನ್ನೊಂದು ಕೊಲೆ, ಹಿಂಸೆಗೆ ಪ್ರತಿಹಿಂಸೆ ನಡೆಯುತ್ತಿದೆ. ಒಂದು ಕಾಲದಲ್ಲಿ ಸಾಮರಸ್ಯಕ್ಕೆ ಹೆಸರಾದ ನಮ್ಮ ಜಿಲ್ಲೆಯಲ್ಲಿಂದು ಸಂಘರ್ಷದ ವಾತಾವರಣ ಉಂಟಾಗಿದೆ. ಜಾತಿ, ಧರ್ಮದ ಮಧ್ಯೆ ನಡೆಯುತ್ತಿರುವ ಸಂಘರ್ಷವನ್ನು ದೂರ ಮಾಡಿ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾಗಿದೆ. ಜಾತ್ಯತೀತ ಮನೊಭಾವದವರೆಲ್ಲ ರಾಜಕೀಯ ಮರೆತು ಒಟ್ಟು ಸೇರಬೇಕಾಗಿದೆ. ಡಿ. 12ಕ್ಕೆ ಫರಂಗಿಪೇಟೆಯಲ್ಲಿ ನಡೆಯುವ ಸಾಮರಸ್ಯಕ್ಕಾಗಿ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ವಿವಿಧ 27 ಸಂಘಟನೆಗಳು ಭಾಗವಹಿಸಲಿವೆ. ಪ್ರತಿ ತಾಲೂಕು ಕೇಂದ್ರದಲ್ಲಿ ಈ ಬಗ್ಗೆ ಸಭೆ ನಡೆಸಲಾಗಿದೆ. ಜಾತ್ಯತೀತ ಮನೋಭಾವದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದ ಅವರು, ನಮ್ಮ ಮುಂದಿನ ಪೀಳಿಗೆಗೆ ಸಾಮರಸ್ಯದ ಬದುಕನ್ನು ಕಲಿಸಿಕೊಡಬೇಕಾದರೆ ಸಮಾನ ಮನಸ್ಕರೆಲ್ಲಾ ಜೀವನ ಪರ್ಯಂತ ಜತೆಯಾಗಿರಬೇಕು ಎಂದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಜಿಲ್ಲೆಯಲ್ಲಿ ಕೋಮುವಾದ ಬೇಡ. ಫರಂಗಿಪೇಟೆಯಲ್ಲಿ ನಡೆಯುವ ಸಭೆಯಲ್ಲಿ ಸಮಾನ ಮನಸ್ಕರೆಲ್ಲಾ ಒಟ್ಟು ಸೇರಿ ಕೋಮುವಾದಿಗಳಿಗೆ ಉತ್ತರ ನೀಡಬೇಕು ಎಂದರು.
ಶಾಸಕ ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಸಿಪಿಐ(ಎಂ)ಮುಖಂಡ ಯಾದವ ಶೆಟ್ಟಿ, ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ತೋಡಾರು ದಿವಾಕರ ಶೆಟ್ಟಿ ಮತ್ತಿತರರು ಭಾಗವಹಿಸಿದರು.