ಮೂಡುಬಿದಿರೆ : ತಾಲೂಕಿನ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವ ದಂಪತಿಗೆ ವಿದ್ಯಾಗಮದ ಬಳಿಕ ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಶಿಕ್ಷಕಿ ಆರೋಗ್ಯ ಚಿಕಿತ್ಸೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರ ಪುತ್ರಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಕುಟುಂಬದ ಪರಿಸ್ಥಿತಿಯನ್ನು ಅರಿತ ರಾಜ್ಯ ಸರ್ಕಾರವು ಬುಧವಾರದಂದು ದಂಪತಿಯ ಪುತ್ರಿಯ ಮನವಿಗೆ ಸ್ಪಂದಿಸಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸುಬುಕ್ ಪೇಜ್ನಲ್ಲಿ ಪ್ರಸ್ತಾಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಐಶ್ವರ್ಯ ಜೈನ್ ತನ್ನ ಕೋವಿಡ್ ಸೋಂಕಿತ ತಾಯಿಯ ವೈದ್ಯಕೀಯ ಶುಶ್ರೂಷೆಗೆ ಪರಿತಪಿಸುತ್ತಿದ್ದ ಅಂಶ, ಆಕೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ ಅಂಶ ಬುಧವಾರ ಬೆಳಗ್ಗೆ ಮಾಧ್ಯಮಗಳಿಂದ ತನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತವನ್ನು ಎಚ್ಚರಿಸಿ ಕ್ರಮ ವಹಿಸಲು ಸೂಚಿಸಲಾಗಿದೆ.
ಐಶ್ವರ್ಯ ಜೈನ್ ಅವರ ತಾಯಿಯ ಸಂಪೂರ್ಣ ಚಿಕಿತ್ಸೆಯ ಖರ್ಚು ವೆಚ್ಚವನ್ನು ಸರ್ಕಾರ ಭರಿಸಲು ನಿರ್ಣಯಿಸಿದೆ. ಅತ್ಯುತ್ತಮ ಚಿಕಿತ್ಸೆಯನ್ನು ಆಸ್ಪತ್ರೆ ಅವರಿಗೆ ಒದಗಿಸಲಿದೆ. ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಯವರಿಗೆ ಖುದ್ದು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ಹೆತ್ತವರ ಬಗ್ಗೆ ಕಾಳಜಿ ವಹಿಸಿದ ಐಶ್ವರ್ಯ ಜೈನ್ ಅವರಿಗೆ ಅಭಿನಂದನೆಗಳು ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡ ಐಶ್ವರ್ಯ ಜೈನ್ ಅವರ ಕುಟುಂಬಕ್ಕೆ ಸ್ಪಂದಿಸಿದ್ದಾರೆ. ಐಶ್ವರ್ಯ ಜೈನ್ ಅವರ ತಾಯಿ ವಿಚಾರದ ತಿಳಿದ ತಕ್ಷಣವೇ ಕುಟುಂಬಕ್ಕೆ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಪಂದಿಸುವಂತೆ ಸೂಚಿಸಿದ್ದೇನೆ. ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಪರಿಸ್ಥಿತಿ ಮನದಟ್ಟು ಮಾಡಿದ್ದೇನೆ. ಮುಖ್ಯಮಂತ್ರಿಗಳು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಅನಾರೋಗ್ಯದಿಂದಾಗಿ ಮೂಡುಬಿದಿರೆ ತಾಲೂಕು ಶಿರ್ತಾಡಿ ಅನುದಾನಿತ ಶಾಲೆಯ ಶಿಕ್ಷಕಿ ಪದ್ಮಾಕ್ಷಿ ಅವರು ಸೆಪ್ಟೆಂಬರ್ 29ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 2ರಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಮಂಗಳವಾರದಂದು ಗಂಟಲುದ್ರವ ಪರೀಕ್ಷೆ ಮಾಡಿದಾಗ, ಕೊರೊನಾ ನೆಗೆಟಿವ್ ಇರುವುದು ದೃಢಪಟ್ಟಿದೆ. ಸಧ್ಯ ಅವರನ್ನು ಕೋವಿಡ್ ವಿಭಾಗದಿಂದ ಜನರಲ್ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಶ್ವಾಸಕೋಶದ ತೊಂದರೆ ಇರುವುದರಿಂದ ಅಕ್ಸಿಜನ್ ಥೆರಪಿಯನ್ನು ನೀಡಲಾಗುತ್ತಿದೆ. ಇವರ ಸಂಪೂರ್ಣ ವೆಚ್ಚವನ್ನು ಸರ್ಕಾರವು ಭರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.