ಪುತ್ತೂರು: ಪುತ್ತೂರಿನ ಕಬಕ ಬಳಿಯ ಅಳಕೆಮಜಲು ನಿನ್ನಿ ಕಲ್ಲಿನಲ್ಲಿ ದೃಷ್ಟಿ ಹಾಸಿದರೆ, ವಿಶಾಲವಾಗಿ ಹಬ್ಬಿರುವ ಹಲಸು ಗಿಡ ಗಮನ ಸೆಳೆಯುತ್ತದೆ. ದೇಶದ ನಾನಾ ಭಾಗಗಳಿಗೆ ಪೂರೈಕೆಗಾಗಿ 80 ಸಾವಿರಕ್ಕೂ ಅಧಿಕ ಕಸಿ ಕಟ್ಟಿದ, ವಿವಿಧ ತಳಿಯ ಹಲಸು ಗಿಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಅನಿಲ್ ಅವರ ಆಸಕ್ತಿಯ ಫಲವೇ ಈ ಹಲಸು ಗಿಡದ ನಾಟಿ. ದೇಶದ ವಿವಿದೆಡೆಗೆ ಹಲಸು ಗಿಡಗಳು ಇಲ್ಲಿಂದ ರವಾನೆಯಾಗುತ್ತಿದೆ. ಪತ್ರಕರ್ತ ಶ್ರೀಪಡ್ರೆ ಅವರಿಂದ ಪ್ರೇರಣೆ ಪಡೆದು ಹಲಸು ಗಿಡದ ಕಸಿಯತ್ತ ಆಸಕ್ತರಾದ ಅನಿಲ್ ಅವರು ಅದರಲ್ಲಿ ಯಶಸ್ಸು ಕಂಡವರು. ಅದುವರೆಗೆ ಹಲಸು ಗಿಡ ಕಸಿ ಮಾಡುತ್ತಿದ್ದರೂ ಕಣ್ಣು ಕಸಿಯಲ್ಲಿ ಯಶಸ್ಸು ಕಂಡವರು ಇರಲಿಲ್ಲ. ಆದರೆ ಅನಿಲ್ ಹಲಸು ಕಣ್ಣು ಕಸಿಯಲ್ಲಿ ಯಶಸ್ಸು ಕಂಡು ಈಗ ದೇಶದಾದ್ಯಂತ ಕಸಿ ಹಲಸು ಗಿಡಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಇದೀಗ ಹಲಸಿನ ಕಸಿಯಲ್ಲಿ ಹಾಗೂ ತಳಿ ಸಂರಕ್ಷಣೆಗಾಗಿ 6 ತಿಂಗಳಲ್ಲಿ 6 ಪ್ರಶಸ್ತಿ ಪಡೆದಿರುವ ಅನಿಲ್ ಅವರ ಬಳಿ ಸುಮಾರು 30 ಅಪರೂಪದ ಹಲಸು ತಳಿಗಳಿವೆ. 200 ಕ್ಕೂ ಮಿಕ್ಕಿದ ಹಲಸು ತಳಿಗಳ ಸಂರಕ್ಷಣೆ ಮಾಡಿದ್ದಾರೆ.
80 ಸಾವಿರ ಹಲಸು ಗಿಡ
ಈ ಬಾರಿ 80 ಸಾವಿರ ಹಲಸು ಗಿಡ ಕಸಿ ಕಟ್ಟಿದ್ದಾರೆ. ಕೇರಳ, ಕರ್ನಾಟಕ, ಗೋವಾ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಹಲಸು ಗಿಡ ರವಾನೆ ಮಾಡಿದ್ದಾರೆ. ಮುಂದಿನ ವರ್ಷ 1 ಲಕ್ಷ ಹಲಸು ಗಿಡ ಕಸಿ ಮಾಡಬೇಕು ಎನ್ನುವ ಅವರು ಈ ವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಅಕ ಹಲಸು ಗಿಡ ಕಸಿ ಕಟ್ಟಿದ್ದಾರೆ.
ಹಲಸು ಯಾತ್ರೆಯ ಗುರಿ
ಕೇರಳದಲ್ಲಿ ಹಲಸು ವಾಹನದ ಮೂಲಕ ಗ್ರಾಮ-ಗ್ರಾಮಗಳಲ್ಲಿ ಹಲಸು ಜಾಗೃತಿ ಮೂಡಿಸಲಾಗುತ್ತಿದೆ. ಜಾಕ್ ಫ್ರುಟ್ ಪ್ರಮೋಶನ್ ಗ್ರೂಪ್ ಮೂಲಕ ಇದು ನಡೆಯುತ್ತಿದೆ. ಈ ವಾಹನದಲ್ಲಿ ಅನಿಲ್ ಅವರ ಹಲಸಿನ ಗಿಡಗಳು ಇವೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಹಲಸು ವಾಹನ ಮಾಡಿ ಹಲಸಿನ ಉತ್ಪನ್ನ ಪರಿಚಯಿಸುವ ಉದ್ದೇಶ ಅನಿಲ್ ಅವರದ್ದು.
ಜಾಕ್ ಅನಿಲ್
ಹಲಸು ಗಿಡಗಳ ಸಂರಕ್ಷಣೆ ಹಾಗೂ ಹಲಸು ಗಿಡಗಳ ಕಸಿಯಲ್ಲೇ ಹೆಚ್ಚಾಗಿ ತೊಡಗಿಸಿಕೊಂಡ ಕಾರಣದಿಂದ ಅನಿಲ್ ಹೆಸರಿನ ಮುಂದೆ ಜಾಕ್ ಸೇರ್ಪಡೆಯಾಗಿ ಜಾಕ್ ಅನಿಲ್ ಆಗಿದ್ದಾರೆ. ಅಪರೂಪದ ಹಲಸು ಗಿಡಗಳು ಇದ್ದರೆ ಉಚಿತವಾಗಿ ಅಂತಹ ಗಿಡಗಳನ್ನು ಕಸಿ ಕಟ್ಟುತ್ತಾರೆ. ಇತ್ತೀಚೆಗೆ ಕೇರಳದ ಕೃಷಿ ಸಚಿವರಾದ ವಿ.ಎಸ್.ಸುನಿಲ್ ಕುಮಾರ್ ಅನಿಲ್ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಿದ್ದರು.