ಮೂಡುಬಿದಿರೆ: ಹದಿನಾರು ಭಾಷೆಗಳಲ್ಲಿ ದಾಖಲೆಯ 40 ಸಾವಿರಕ್ಕೂ ಮಿಕ್ಕಿದ ಹಾಡುಗಳಿಂದ ಆರು ಬಾರಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಎದೆತುಂಬಿ ಹಾಡುವೆನು ಕಿರುತೆರೆಯ ಸಂಗೀತ ಸ್ಪರ್ಧಾ ಕಾರ್ಯಕ್ರಮದ ಸಂದರ್ಭದಲ್ಲಿ ತೀರ್ಪುಗಾರರಾಗಿದ್ದ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರು ಬಿಳಿ ನಾಲ್ಕರ ಪಟ್ಟಿಯಲ್ಲಿ ಶ್ರುತಿಪೆಟ್ಟಿಗೆ ಇಲ್ಲದೇ ಹಾಡಿದ್ದನ್ನು ಕೇಳಿ ಇದು ಅಧ್ಭುತ ಎಂದು ಉದ್ಗರಿಸಿ ಯಕ್ಷಗಾನಕ್ಕೂ ರಾಜಮರ್ಯಾದೆ ನೀಡಿದ್ದ ಮಹಾನ್ ಕಲಾವಿದ ಎಂದು ಯಕ್ಷಗಾನ ವಿಮರ್ಶಕ, ಸಂಘಟಕ ಎಂ. ಶಾಂತರಾಮ ಕುಡ್ವ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ವತಿಯಿಂದ ತ್ರಿಭುವನ್ ಜೇಸೀಸ್ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ ಇವುಗಳ ಸಹಭಾಗಿತ್ವದಲ್ಲಿ ಸಮಾಜಮಂದಿರದಲ್ಲಿ ನಡೆದ `ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಎದೆ ತುಂಬಿ ಹಾಡಿದೆನು’ ಬಹುಮಾನಿತ, ಜೈನ ಪ್ರೌಢಶಾಲಾ ಸಂಸ್ಕøತ ಶಿಕ್ಷಕ ಯಶವಂತ ಆಚಾರ್ಯ ಅವರು ಎಸ್ಪಿಬಿ ಜತೆಗಿನ ಸುಮಾರು 10 ವರ್ಷಗಳ ಬಾಂಧವ್ಯ ಸ್ಮರಿಸಿಕೊಂಡು, `ನೂರೊಂದು ನೆನಪು’ ಹಾಡಿ, `ಮೊದಲು ಇನ್ನೊಬ್ಬರನ್ನು ಗೌರವಿಸುವ ಗುಣ, ಆಮೇಲೆ ಪ್ರತಿಭೆ ಎಂಬುದನ್ನು ಸದಾ ಒತ್ತಿ ಹೇಳುತ್ತಿದ್ದ ಎಸ್ಪಿಬಿ ಅವರು ಉದಯೋನ್ಮುಖ ಗಾಯಕರಿಗೆ ನೀಡುತ್ತಿದ್ದ ಮಾರ್ಗದರ್ಶನ, ತುಂಬುತ್ತಿದ್ದ ಸ್ಪೂರ್ತಿ ಅವಿಸ್ಮರಣೀಯ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ, ಸಮಾಜ ಮಂದಿರ ಸಭಾದ ಜತೆ ಕಾರ್ಯದರ್ಶಿ ಎಂ. ಗಣೇಶ ಕಾಮತ್ ಮಾತನಾಡಿ ಐದು ದಶಕಗಳ ಕಾಲ ಸಂಗೀತ ಸಮ್ರಾಟನಾಗಿ ಮೆರೆದ ಅಪೂರ್ವ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಮೂಡುಬಿದಿರೆಯಲ್ಲಿ ಎರಡು ಬಾರಿ ಸಂಗೀತ ಕಾರ್ಯಕ್ರಮ ನೀಡಿ, ಸಮ್ಮಾನಿತರಾಗಿ ಮರುಜನ್ಮವಿದ್ದರೆ ಕನ್ನಡ ನಾಡಿನಲ್ಲೇ ಹುಟ್ಟುವಾಸೆಯನ್ನೂ ಪ್ರಕಟಿಸಿದ್ದರು. ಅವರ ಹೆಸರಿನಲ್ಲಿ ಮೂಡುಬಿದಿರೆಯಲ್ಲೂ ಪ್ರತಿವರ್ಷ ಸಂಗೀತಾರಾಧನೆ ನಡೆಯುವಂತಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.
ಜೇಸೀಸ್ ಅಧ್ಯಕ್ಷ ಸಂತೋಷ್ ಕುಮಾರ್, ರೋಟರಿ ಮಿಡ್ಟೌನ್ ಅಧ್ಯಕ್ಷ ಸುಶಾಂತ್ ಕರ್ಕೇರಾ, ಅಭಿಮಾನಿಗಳ ಪರವಾಗಿ ದ.ಕ.ಜಿಲ್ಲಾ ಹೋಟೆಲ್ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಪಡಿಯಾರ್ ಮರವಂತೆ ಹಾಗೂ `ಮೋಕೆದ ಸಿಂಗಾರೀ’ ಹಾಡಿನೊಂದಿಗೆ ನವೀನ್ ಟಿ. ಆರ್. ಅವರು ಪಿಎಸ್ಬಿ ಅವರಿಗೆ ನುಡಿನಮನ ಸಲ್ಲಿಸಿದರು. ಕಲಾವಿದರಾದ ಉಮೇಶ್ ಮಿಜಾರ್, ರಾಜೇಂದ್ರಕೃಷ್ಣ, ಪಟ್ಲ ಫೌಂಡೇಶನ್ ಕಾರ್ಯದರ್ಶಿ ಮನೋಜ್ ಶೆಟ್ಟಿ , ಉದ್ಯಮಿ ಪ್ರೇಮನಾಥ ಮಾರ್ಲ ಮೊದಲಾದವರಿದ್ದರು. ಪಿಎಸ್ಬಿ ಅವರಿಗೆ ಮೌನಪ್ರಾರ್ಥನೆಯೊಂದಿಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು.
ಪಟ್ಲ ಫೌಂಡೇಶನ್ ಅಧ್ಯಕ್ಷ ದಿವಾಕರ ಶೆಟ್ಟಿ ತೋಡಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಶಂಕರಾಭರಣಂ’ ಚಿತ್ರದ ಗೀತೆ ಹಾಡಿದರು. ಸಂಚಾಲಕ ಎನ್. ಸದಾಶಿವ ರಾವ್ ನಿರೂಪಿಸಿ, ಯಕ್ಷಗುರು ಕಿನ್ನಿಗೋಳಿ ಸದಾಶಿವ ಶೆಟ್ಟಿಗಾರ್ ವಂದಿಸಿದರು.