ಉಡುಪಿ: ಬಾವಿಗೆ ಬಿದ್ದ ಕೊಡಪಾನ ಮೇಲೆತ್ತಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹನೇಹಳ್ಳಿ ಗ್ರಾಮದ ಉದ್ದಲಗುಡ್ಡೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಇಲ್ಲಿನ ಮಾಸ್ತಿ ನಗರದ ಸುರೇಶ(32) ಎಂದು ಗುರುತಿಸಲಾಗಿದೆ. ಸರ್ಕಾರಿ ಬಾವಿಯಲ್ಲಿ ಬಿದ್ದ ರೋನಾಲ್ಡ್ ಡಿ’ಸೋಜ ಎಂಬವರ ಕೊಡಪಾನ ಮೇಲೆತ್ತಲು ಇಳಿದ ಸುರೇಶ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದರಿಂದ ಈ ಅನಾಹುತ ಸಂಭವಿಸಿದೆ ಎಂದು ಮೃತರ ಸಹೋದರ ಸುನಿಲ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.