ಮೂಡುಬಿದಿರೆ: ಹೊಸಬೆಟ್ಟು ಗಾ.ಪಂ ವ್ಯಾಪ್ತಿಯ ಪುಚ್ಚಮೊಗರು ಶಾಂತಿರಾಜ್ ಕಾಲನಿ ಬಳಿಯಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಪರಿಸರದ ಜನರು ಭಯಭೀತರಾಗಿರುವುದರಿಂದ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜೈನ್ ಅವರು ಕಳೆದ 2 ಎರಡು ದಿನಗಳಿಂದ ಶಂತಿರಾಜ ಕಾಲನಿ ಬಳಿ ಚಿರತೆಯು ತಿರುಗಾಡುತ್ತಿದೆ. ಅಲ್ಲದೆ ಮಂಗಳವಾರ ರಾತ್ರಿ ಚಿರತೆ ಕಾಣಿಸಿಕೊಂಡಿರುವುದರಿಂದ ಪರಿಸರದ ಜನರು ಭಯಬೀತರಾದ ಹಿನ್ನಲೆಯಲ್ಲಿ ತಕ್ಷಣ ಅರಣ್ಯಾಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿ ಬೋನನ್ನು ಇಟ್ಟಿದ್ದಾರೆ. ಅಲ್ಲದೆ ಆದಷ್ಟು ಬೇಗನೇ ಚಿರತೆಯನ್ನು ಹಿಡಿಯುವ ಭರವಸೆಯನ್ನು ನೀಡಿದ್ದಾರೆ. ಆದ್ದರಿಂದ ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಆರ್ ಸುಬ್ರಹ್ಮಣ್ಯ ಅವರು ಮಾತನಾಡಿ ಕಾಡು ಪ್ರದೇಶಗಳಾಗಿರುವುದರಿಂದ ಪ್ರಾಣಿಗಳು ಇರುವುದು ಸಹಜ. ಚಿರತೆಯನ್ನು ಹಿಡಿಯಲು ವ್ಯವಸ್ಥೆಯನ್ನು ಮಾಡಲಾಗಿದೆ. ಶೀಘ್ರವಾಗಿ ಹಿಡಿಯಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಎಂಪಿಎಂಸಿ ಸದಸ್ಯ ಶ್ರೀನಿವಾಸ, ಉಪವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ, ಸಿಬಂದಿಗಳಾದ ಅಯ್ಯಣ್ಣ, ನಾರಾಯಣ, ಚಂದ್ರಯ್ಯ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.