ಕಾಸರಗೋಡು: ಸಂಪರ್ಕ ಮೂಲಕ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬೀದಿ ಬದಿ ಕಾರ್ಯಾಚರಿಸುವ ಗೂಡಂಗಡಿಗಳಲ್ಲಿ ಇನ್ನು ಮುಂದೆ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಬೇಕರಿ ಜೊತೆ ಕಾರ್ಯಾಚರಿಸುವ ಜ್ಯೂಸ್, ಕಾಫಿ, ಚಹಾ ದ ಅಂಗಡಿಗಳನ್ನು ಸಂಜೆ 6 ಗಂಟೆಗೆ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ.
ಕೋವಿಡ್ ಮಾನದಂಡದಂತೆ ಕಾರ್ಯಾಚರಿಸಬೇಕು. ಉಲ್ಲಂಘಿಸಿದ್ದಲ್ಲಿ ಗೂಡಂಗಡಿಗಳ ವಿರುದ್ಧ ಕ್ರಮ ತೆಗೆದುಕೊಂಡು ಅವುಗಳನ್ನು ತೆರವುಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಉಳಿದ ವ್ಯಾಪಾರ ಮಳಿಗೆಗಳು ರಾತ್ರಿ9 ರ ತನಕ ಕಾರ್ಯಾಚರಿಸಬಹುದು. ಗುರುವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವರ್ತಕರ ಸಂಘದ ಸಮನ್ವಯ ಸಮಿತಿ ಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೋವಿಡ್ ಮಾನದಂಡಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ವ್ಯಾಪಾರ ನಡೆಸಬೇಕು. ಆದೇಶ ಉಲ್ಲಂಘಿಸಿದ್ದಲ್ಲಿ ಅಂಗಡಿ ತೆರವುಗೊಳಿಸಿ ಕ್ರಮ ತೆಗೆದುಕೊಳ್ಳಲು ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ಆದೇಶ ನೀಡಲಾಗಿದೆ.
ಈ ಅಂಗಡಿಗಳಲ್ಲಿ ಡಿಸ್ಪಾಸಿಬಲ್ ಗ್ಲಾಸ್ ಗಳಲ್ಲಿ ಮಾತ್ರ ಪಾನೀಯ ನೀಡಬೇಕು. ಸ್ಟೀಲ್ ಗ್ಲಾಸ್, ಮರುಬಳಕೆಯ ತಟ್ಟೆಗಳನ್ನು ಬಳಸಕೂಡದು. ಗ್ರಾಹಕರು ಗುಂಪು ಗೂಡುವಂತಿಲ್ಲ. ಉಳಿದ ಅಂಗಡಿಗಳು ರಾತ್ರಿ 9 ಗಂಟೆ ತನಕ ಕಾರ್ಯಾಚರಿಸಬಹುದು . ಸಣ್ಣ ಉದ್ದಿಮೆಗಳಲ್ಲಿ ದುಡಿಯುವ ಹೊರ ರಾಜ್ಯ ಕಾರ್ಮಿಕರಿಗೆ ಜಿಲ್ಲಾಡಳಿತ ನಿಗಧಿಗೊಳಿಸಿರುವ ಕೇಂದ್ರಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಬಳಸಬಹುದಾಗಿದೆ. ಈ ಕೇಂದ್ರಗಳಿಗೆ ಅಗತ್ಯ ಇರುವ ಕುಡಿಯುವ ನೀರು, ಆಹಾರ ಹಾಗೂ ಇನ್ನಿತರ ವ್ಯವಸ್ಥೆಗಳ ವೆಚ್ಚವನ್ನು ಉದ್ದಿಮೆಗಳ ಮಾಲೀಕರು ವಹಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ವರ್ತಕರ ಸಂಘಗಳ ಪ್ರತಿನಿಧಿಗಳಾದ ರಾಘವನ್ ವೆಳುತ್ತೋಳಿ, ಅಹಮ್ಮದ್ ಶರೀಫ್, ಗೋಕುಲ್ ದಾಸ್ ಕಾಮತ್, ನಾರಾಯಣ ಪೂಜಾರಿ, ಕೆ.ರವೀಂದ್ರನ್, ಕೆ.ರವೀಂದ್ರನ್, ಸಿ.ಬಿಂದು ಮೊದಲಾದವರು ಉಪಸ್ಥಿತರಿದ್ದರು.