ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ತ್ಯಾಗ ಬಲಿದಾನ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದರು. ಇಂದೇ ನಿಧನರಾಗಿದ್ದ ಮೂವರ ಶವಗಳನ್ನು ಈದ್ಗಾಗಗೆ ತಂದಿದ್ದ ಮುಸ್ಲಿಂ ಬಾಂಧವರು ಶವಗಳ ಬಳಿ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಿ, ಮೃತಪಟ್ಟವರ ಆತ್ಮಗಳಿಗೆ ಸದ್ಗತಿ ಸಿಗಲೆಂದು ಪ್ರಾರ್ಥಿಸಿದರು.
ಚಿಕ್ಕ ಮಕ್ಕಳು, ಹಿರಿಯರು ಸೇರಿದಂತೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರವಾಗಿ ಶುಭಾಶಯ ವಿನಮಯ ಮಾಡಿಕೊಂಡರು. ಬಕ್ರೀದ್ ಅಂದರೆ ಪ್ರಾಣಿಗಳ ಬಲಿ ಕೊಡುವುದು ವಾಡಿಕೆ ಇದೆ. ಹೀಗಾಗಿ ಮುಸ್ಲಿಂ ಬಾಂಧವರು ಕುರಿ, ಟಗರು, ಮೇಕೆ ಬಲಿ ನೀಡಿ ಬಕ್ರೀದ್ ಆಚರಿಸುತ್ತಾರೆ.
ಈ ಮೂಲಕ ಅಲ್ಲಾಹ ಕೃಪೆಗೆ ಪಾತ್ರರಾಗುತ್ತಾರೆಂಬ ನಂಬಿಕೆ ಇದೆ. ಬಡವರಿಗೆ ಸಂಬಂಧಿಕರಿಗೆ, ಬೇರೆ ಧರ್ಮದ ಸ್ನೇಹಿತರನ್ನು ತಮ್ಮ ಮನೆಗೆ ಕರೆಯಿಸಿ ಊಟ ಮಾಡಿಸುವ ಮೂಲಕ ಪ್ರೀತಿ ವಾತ್ಸಲ್ಯ ವಿನಿಮಯ ಮಾಡಿಕೊಳ್ಳುವ ವಾಡಿಕೆ ಹಿಂದಿನಿಂದಲ್ಲೂ ನಡೆದುಕೊಂಡು ಬಂದಿದೆ.
ಬಕ್ರೀದ್ ಹಿನ್ನೆಲೆಯಲ್ಲಿ, ನಗರದ ಆಯ ಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು.