ಗುಂಡ್ಲುಪೇಟೆ : ಕಿತ್ತು ಬೀಳುವ ಸ್ಥಿತಿಯಲ್ಲಿರುವ ಮೇಲ್ಛಾವಣಿ, ಒದ್ದೆಯಿಂದ ಕೂಡಿದ ಗೋಡೆಗಳು ಇದು ಗುಂಡ್ಲುಪೇಟೆ ತಾಲೂಕಿನ ಪಡಗೂರಿನ ಅಂಗನವಾಡಿ -2 ಕಟ್ಟಡದ ದುರಾವಸ್ಥೆ. ಪುಟ್ಟ ಕಂದಮ್ಮಗಳು ಯಾವುದೇ ಪರಿವಿಲ್ಲದೆ ಈ ಶಿಥಿಲಾವಸ್ಥೆಯಲ್ಲಿನ ಕಟ್ಟಡದಲ್ಲಿಯೇ ಪಾಠದ ಜೊತೆ ಆಟವಾಡುತ್ತಿದ್ದಾರೆ.
ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪಡಗೂರು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲೇ ನಾಲ್ಕು ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಮಾಡಿ ವರ್ಷಗಳೆ ಕಳೆದರು ಸಹ ಪೂರ್ಣಗೊಂಡಿಲ್ಲ,
ತಾಲೂಕು ಪಂಚಾಯತಿ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಚಾಮರಾಜನಗರದ ನಿರ್ಮಿತಿ ಕೇಂದ್ರಕ್ಕೆ ಟೆಂಡರ್ ನೀಡಲಾಗಿತ್ತು ಎನ್ನಲಾಗಿದೆ ಆದರೆ ಸಂಸ್ತೆಯು ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿ ಕೈ ತೊಳೆದುಕೊಂಡಿದೆ. ಇತ್ತ ಮಕ್ಕಳು ಕೂರುವ ಕೊಠಡಿ ಶಿಥಿಲಾವಸ್ಥೆಗೆ ತಲುಪಿದ್ದರೂ ಸಹ ಜನಪ್ರತಿನಿದಿಗಳು ಅಧಿಕಾರಿಗಳು ಇಚ್ಛಾಶಕ್ತಿ ತೋರುವ ಲಕ್ಷಣಗಳು ಕಾಣುತ್ತಿಲ್ಲ.
ಪಡಗೂರು ಗ್ರಾಮಪಂಚಾಯತಿ ಸನಿಹದಲ್ಲೇ ಈ ಕಟ್ಟಡವಿದ್ದರು ಸಹ ಏನು ಪ್ರಯೋಜನವಾಗುತ್ತಿಲ್ಲ, ಅದೆಷ್ಟೋ ಬಾರಿ ಮನವಿ ಸಲ್ಲಿಸಿದರು ಸಹ ಪತ್ರಗಳು ಕಡತದಲ್ಲೇ ದೂಳು ಹಿಡಿಯುತ್ತಿವೆ, ಮಕ್ಕಳಿಗೆ ನೂತನ ಕಟ್ಟಡ ವ್ಯವಸ್ಥೆ ಮಾಡುವಂತೆ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನಿರ್ಮಾಣ ಹಂತದಲ್ಲೇ ಅರ್ಧಕ್ಕೆ ನಿಂತಿರುವ ಕಟ್ಟಡ ಕಾಮಗಾರಿಯನ್ನ ಪುನರಾರಂಭಿಸಲು ಗುತ್ತಿಗೆ ಪಡೆದ ಸಂಸ್ಥೆ ಮುಂದಾಗಬೇಕಿದೆ ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಧೋರಣೆಗೆ ಪುಟ್ಟ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ.
ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಕಟ್ಟಡ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೆ ಕೆಲಸ ಸುಗಮವಾಗಿ ಪೂರ್ಣವಾಗುತ್ತದೆ ಎಂಬ ಭರವಸೆಯನ್ನ ಪೋಷಕರಿರಿಸಿದ್ದು ಇಲಾಖೆ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಬೇಕಿದೆ.