ಬೀದರ್ : ಹುಬ್ಬಳ್ಳಿಯ ವಿರಾಪೂರ್ ಬಡಾವಣೆಯ ನಿವಾಸಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬೀದರ್ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತ ಹತ್ತಿರದ ಪ್ರವಾಸಿ ಮಂದಿರದಿಂದ ಭಗತಸಿಂಗ್ ವೃತ್ತ, ಮಹಾವೀರ ವೃತ್ತ, ತಹಸೀಲ್ ಕಛೇರಿ ಮೂಲಕ ಜಿಲ್ಲಾಧಿಕಾರಿಗಳ ಕಛೇರಿವರೆಗೆ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಅಂಜಲಿ ಕೊಲೆ ಮಾಡಿದವನನ್ನು ಗಲ್ಲಿಗೇರಿಸಿ ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಅವರು ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕೊಲೆಯ ಕ್ರೂರ ಘಟನೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅಂಜಲಿ ಕುಟುಂಬಕ್ಕೆ ೧.೦೦ ಕೋಟಿ ಪರಿಹಾರ ನೀಡಬೇಕು ಎಂದು ಕಲಬುರಗಿಯ ತೊನಸನಹಳ್ಳಿ ಅಲ್ಲಮ ಪ್ರಭು ಪೀಠದ ಪರಮ ಪೂಜ್ಯರಾದ ಶ್ರೀ ಮಲ್ಲಣ್ಣಪ್ಪಾ ಮಹಾಸ್ವಾಮಿಗಳು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಅಂಜಲಿ ಅಂಬಿಗಾರ ಅವರನ್ನು ಕೊಲೆ ಮಾಡಿದ ಆರೋಪಿಯನ್ನು ಗಲ್ಲಿಗೇರಿಸಬೇಕು. ಕೊಲೆಯಾದ ಅಂಜಲಿ ಕುಟುಂಬಕ್ಕೆ ಸ್ವಂತ ಮನೆ ಹಾಗೂ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಟೋಕರೆ ಕೋಳಿ ಕಬ್ಬಲಿಗ, ಗಂಗಾಮತ, ಅಂಬಿಗ ಸೇರಿದಂತೆ ೩೭ ಪರ್ಯಾಯ ಪದಗಳಿಂದ ಕರೆಯಲ್ಪಡುವ ಈ ಸಮಾಜದ ೬೦ ಲಕ್ಷ ಜನರ ಎದೆ ಝಲ್ ಎನಿಸಿದೆ.
ಅಲ್ಲದೇ ಪದೆ ಪದೆ ತಮ್ಮ ಸಮುದಾಯದ ಮೇಲೆ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ಶೋಷಣೆಗಳಂತಹ ಹೀನ ದುಷ್ಕೃತ್ಯಗಳು ನಿರಂತರವಾಗಿ ಜರುಗುತ್ತಲೆ ಇವೆ. ತಮ್ಮ ಸಮಾಜಕ್ಕೆ ಒಟ್ಟಾರೆ ರಕ್ಷಣೆ ಇಲ್ಲದಂತಾಗಿದೆ ಅನಾಥ ಸಮಾಜ ಎನಿಕೊಳ್ಳತೊಡಗಿದೆ. ಸಮಾಜದ ರಕ್ಷಣೆಗಾಗಿ ಸರ್ಕಾರ ಮುಂದಾಗದೇ ಇರುವುದು ದುರಂತದ ಸಂಗತಿಯಾಗಿದೆ ಎಂದು ಜಗನ್ನಾಥ ಜಮಾದಾರ್ ಅವರು ತಿವ್ರ ಕಳವಳ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗುಂಡಾಗಳನ್ನು ಎನ್ಕೌಂಟರ್ ಮಾಡಬೇಕು ಎಂದು ಈಶ್ವರಸಿಂಗ್ ಠಾಕೂರ್ ಹೇಳಿದರು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ್ ಅವರ ಕೊಲೆ ಮಾಡಿದ ಆರೋಪಿಗಳನ್ನು ರಾಜ್ಯ ಸರ್ಕಾರ ಎನ್ ಕೌಂಟರ್ ಮಾಡಬೇಕು ಎಂದು ನಗರ ಸಭೆ ಸದಸ್ಯರಾದ ಶಶಿ ಹೊಸಳ್ಳಿ ಒತ್ತಾಯಿಸಿದರು.