ರಾಮನಗರ: ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಹಾಗೂ ಅಧಿಕಾರಿಗಳ ಜನ ವಿರೋಧಿ ಆಡಳಿತ ವೈಖರಿಯನ್ನು ವಿರೋಧಿಸಿ ನಗರದ ಕಾರ್ಯಾಲಯದ ಎದುರು ನಗರಸಭೆ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದಾರೆ.
ಜೆಡಿಎಸ್ ಸದಸ್ಯರ ಜೊತೆಗೂಡಿ ಆಡಳಿತರೂಢ ಕಾಂಗ್ರೆಸ್ನ ಕೆಲವು ಸದಸ್ಯರು ತಮ್ಮ ಪಕ್ಷದ ಅಧ್ಯಕ್ಷೆ ಪಾರ್ವತಮ್ಮ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟಿಸಿ ನಗರಸಭೆ ಆವರಣದಲ್ಲಿ ಗೊಂದಲದ ವಾತಾವರಣ ಉಂಟು ಮಾಡಿದರು. ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ಸೀರಹಳ್ಳ ಪಾತ್ರದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಟಿಪ್ಪುನಗರ, ಅರ್ಕೇಶ್ವರ ಕಾಲೋನಿ, ಟ್ರೂಪ್ ಲೇನ್, ಜಿಯಾವುಲ್ಲಾ ಬ್ಲಾಕ್, ರೆಹಮಾನಿಯ ನಗರದ ನಿವಾಸಿಗಳು ಮನೆಗಳನ್ನು ಕಳೆದುಕೊಂಡು ನಿಲ್ಲಲು ನೆಲೆ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿಯೂ ಅಧ್ಯಕ್ಷರು ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರಾದ ಫೈರೋಜ್ ಪಾಷ ಮತ್ತು ಗ್ಯಾಬ್ರಿಯಲ್ ಆರೋಪಿಸಿದರು.
ನೆರೆ ಹಾನಿ ವೀಕ್ಷಣೆಗಾಗಿ ಬರುವ ಗಣ್ಯರು, ಸಚಿವರ ಜೊತೆ ಫೋಟೋಗೆ ಪೋಸ್ ಕೊಟ್ಟು ಅಧ್ಯಕ್ಷರು ವಾಪಸ್ಸು ಹೊರಟು ಹೋದರೆ ನಮ್ಮ ಜನರ ಕಷ್ಟಗಳನ್ನು ಯಾರೂ ಕೇಳುತ್ತಾರೆ. ನೆರೆಯ ನೀರು ಮನೆಗೆ ಹಾಗೂ ಬೀದಿಗಳಲ್ಲಿ ಹರಿದು ಎಲ್ಲವೂ ಸಂಪೂರ್ಣವಾಗಿ ಕಿತ್ತುಹೋಗಿದೆ. ಯುಜಿಡಿ ಕಟ್ಟಿಕೊಂಡು ಕಲ್ಮಶ ನೀರು ರಸ್ತೆ ಹರಡಿ ಗಬ್ಬುನಾತ ಬೀರುತ್ತಿದೆ. ಜನಪ್ರತಿನಿಧಿಗಳಾದ ನಮಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದೆಲ್ಲವನ್ನು ಕಂಡು ಕಾಣದಂತೆ ಅಧ್ಯಕ್ಷೆ ಪಾರ್ವತಮ್ಮ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ತೊಡಗಿದ್ದ ಸದಸ್ಯರನ್ನು ಸಮಾಧಾನ ಪಡಿಸಿ ಆಯುಕ್ತ ನಂದಕುಮಾರ್ ಹಾಗೂ ಹಿರಿಯ ಸದಸ್ಯ ಕೆ.ಶೇಷಾದ್ರಿ ಅವರುಗಳು ಸಭಾಂಗಣದೊಳಗೆ ಕರೆದೊಯ್ದರು. ಅಲ್ಲಿಯೂ ಅಧ್ಯಕ್ಷೆ ಪಾರ್ವತಮ್ಮ ಅವರನ್ನು ಮುತ್ತಿಗೆ ಹಾಕಿದ ಸದಸ್ಯರು ತರಾಟೆ ತೆಗೆದುಕೊಂಡರು.
ಈ ವೇಳೆ ಕೆ.ಶೇಷಾದ್ರಿ ಮತ್ತು ನಂದಕುಮಾರ್ ರವರು, ಮುಂದಿನ ದಿನಗಳಲ್ಲಿ ಸಂತ್ರಸ್ತ ವಾರ್ಡುಗಳ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಶ್ರಮಿಸೋಣ. ಈ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಯಿನ್ ಅಹಮದ್ ಖುರೇಶಿ, ಸದಸ್ಯರಾದ ಮುತ್ತುರಾಜ್, ಮಂಜುಳಾ ವೆಂಕಟೇಶ್, ಸೈಯದ್ ಮುಂಜಿಲ್ ಆಗಾ, ಸೈಯದ್ ಅಕ್ಲೀಮ ಇಬ್ರಹಾರ್, ನಿಜಾಮುದ್ದೀನ್ ಷರೀಫ್, ಆಯಿಷಾಬಾನು, ಮಹಮದ್ ಆರೀಫ್, ಅಜ್ಮತ್, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ನಗರ ಘಟಕ ಅಧ್ಯಕ್ಷ ಸುಹೇಲ್ ಪಾಷ ಮತ್ತಿತರರು ಹಾಜರಿದ್ದರು.