ರಾಮನಗರ: ಚಾಮುಂಡೇಶ್ವರಿ ಮತ್ತು ಜನರ ಆಶಿರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಅವರು ನಿನ್ನೆಚಾಮುಂಡೇಶ್ವರಿ ಕರಗ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆ ಇದೆ, ತಾಯಿ ಚಾಮುಂಡೇಶ್ವರಿ ಇಚ್ಛೆ ಬೇರೆ ಇದೆ. ಚಾಮುಂಡೇಶ್ವರಿ ಮತ್ತು ಜನರ ಆಶಿರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ,ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಎಂದು ಹೇಳಿದರು.
ಕೋವಿಡ್ನಿಂದ ಕಳೆದ ಮೂರು ವರ್ಷ ಕರಗ ಮಾಡಲು ಸಾಧ್ಯವಾಗಿರಲಿಲ್ಲ. ನನಗೆ ರಾಜಕೀಯ ಜನ್ಮ ಕೊಟ್ಟಿರುವ ನಿಮ್ಮ ಜೊತೆ ಮನಸ್ಸಿನಲ್ಲಿ ಇರುವ ಭಾವನೆ ಹಂಚಿಕೊಳ್ಳಲು ಈ ಕಾರ್ಯಕ್ರಮ. ರೈತರು ನೆಮ್ಮದಿಯಿಂದ ಬದಕಲು ಚಾಮುಂಡೇಶ್ವರಿ ತಾಯಿ ಕರುಣಿಸಲಿ.
2019ರ ಜುಲೈ ತಿಂಗಳಲ್ಲಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕುತಂತ್ರದಿಂದ ತೆಗೆಯಲಾಗಿತ್ತು. ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆದು, ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ ಎಂದು ಹೇಳಿದರು.