ಮೈಸೂರು: ಭಾರೀ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕೊನೆಗೂ ನಡೆದಿದ್ದು ಬಿಜೆಪಿ ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆದಿದೆ.
ಚುನಾವಣೆಯಲ್ಲಿ ಬಿಜೆಪಿಯ ಶಿವಕುಮಾರ್ ಮೇಯರ್ ಮತ್ತು ಉಪಮೇಯರ್ ಆಗಿ ಡಾ.ಜಿ. ರೂಪ ಯೋಗೀಶ್ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನ ಸದಸ್ಯೆ ರೇಷ್ಮಾಬಾನು ನಾಮಪತ್ರ ಸಲ್ಲಿಸಿದ್ದರೂ ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಉಪಮೇಯರ್ ಪಟ್ಟ ಕೈತಪ್ಪಿತು.
ಉಪಮೇಯರ್ ಸ್ಥಾನ ಬಿಸಿಎ ಗೆ ಮೀಸಲಾಗಿತ್ತಾದರೂ ಜೆಡಿಎಸ್ ನ ರೇಷ್ಮಾಬಾನು ನಾಮಪತ್ರ ಸಲ್ಲಿಸುವ ವೇಳೆ ಬಿಸಿಎ ಸರ್ಟಿಫಿಕೇಟ್ ಸಲ್ಲಿಸದ ಕಾರಣ ರೇಷ್ಮಾಬಾನು ನಾಮಪತ್ರ ತಿರಸ್ಕೃತಗೊಂಡು ಉಪಮೇಯರ್ ಸ್ಥಾನ ಕೈತಪ್ಪಿದೆ.
ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗೋಪಿ ನಾಮಪತ್ರವನ್ನು ಹಿಂಪಡೆದರು. ಜೆಡಿಎಸ್ ನ ಕೆ.ವಿ.ಶ್ರೀಧರ್ ಅವರೂ ಕೂಡ ನಾಮಪತ್ರ ಹಿಂಪಡೆದರು. ನಿರ್ಮಲಾ ಹರೀಶ್ ಅವರನ್ನು ಹೈಜಾಕ್ ಮಾಡಿದ್ದು, ನಿರ್ಮಲಾ ಹರೀಶ್ ಕಾಂಗ್ರೆಸ್ ಪರ ಮತಚಲಾಯಿಸಿದರು. ಇದರಿಂದ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಸೈಯದ್ ಹಸ್ರತ್ ಉಲ್ಲಾ ಮತ್ತು ಬಿಜೆಪಿಯ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ ಮೈಸೂರು ನೂತನ ಮೇಯರ್ ಆಗಿ 47ನೇ ವಾರ್ಡ್ ಸದಸ್ಯರಾದ ಶಿವಕುಮಾರ್ ಅವರು ಗೆಲುವು ಪಡೆದು ಮೇಯರ್ ಪಟ್ಟ ಅಲಂಕರಿಸಿದರು. ಬಿಜೆಪಿ ಸದಸ್ಯ ಶಿವಕುಮಾರ್ 48ಮತ ಕಾಂಗ್ರೆಸ್ ನ ಸೈಯದ್ ಹಸ್ರತ್ ಉಲ್ಲಾ 28ಮತಗಳಿಗೆ ಸಮಾಧಾನಪಟ್ಟುಕೊಳ್ಳುವಂತಾಯಿತು. ಬಿಜೆಪಿ ಎರಡನೇ ಬಾರಿಗೆ ಮೇಯರ್ ಪಟ್ಟ ಅಲಂಕರಿಸಿದೆ.