ಮಂಡ್ಯ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸತತ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರು ಮಣಿಗೆರೆಗೆ ಆಗಮಿಸಿದ ವೇಳೆ ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿ ಮೆರವಣಿಗೆ ನಡೆಸಿದರು.
ಭಾರತೀನಗರ ಬಳಿಯ ಮಣಿಗೆರೆ ಗ್ರಾಮದ ನಿವಾಸಿಗಳಾದ ಎಂ ಚಿಕ್ಕಣ್ಣ ಮತ್ತು ಎಂ ಮಹದೇವು ಅವರು ಗಡಿಭದ್ರತಾ ಪಡೆಯಲ್ಲಿ ಸುಮಾರು 21 ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾಗಿದ್ದು, ಅವರು ಮಂಗಳವಾರ ಗ್ರಾಮಕ್ಕೆ ಆಗಮಿಸಿದ್ದರು. ವಿಷಯ ತಿಳಿದ ಗ್ರಾಮದ ಹಿರಿಯರು ಮತ್ತು ಯುವಕರು ಅವರನ್ನು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.
ಬಳಿಕ ಮದ್ದೂರು ಮಳವಳ್ಳಿ ಮುಖ್ಯ ರಸ್ತೆಯಲ್ಲಿ ತೆರೆದ ಜೀಪ್ ನಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ಸಂದರ್ಭ ನಡೆದ ಮೆರವಣಿಗೆಯಲ್ಲಿ ಪೂಜಾ ಕುಣಿತ ಮತ್ತು ಡೊಳ್ಳು ಕುಣಿತ, ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಂಡಿದ್ದವು. ಈ ವೇಳೆ ದಾರಿಯುದ್ದಕ್ಕೂ ಅಂಗಡಿ ಮಾಲೀಕರು ಮತ್ತು ಅಭಿಮಾನಿಗಳು ಯೋಧರಿಗೆ ಹೂವಿನ ಹಾರ ಹಾಕಿ ಅಭಿನಂದಿಸಿದರು.
ಬಳಿಕ ತವರು ಗ್ರಾಮ ಮಣಿಗೆರೆ ಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮಣಿಗೆರೆಯ ಶಶಿಗೌಡ ಅವರು, ಇಂದು ನಮ್ಮ ಊರಿನ ಇಬ್ಬರು ಯೋಧರು ನಿವೃತ್ತಿ ಹೊಂದಿರುವ ಹಿನ್ನಲೆಯಲ್ಲಿ ಅವರನ್ನು ನಮ್ಮ ಊರಿನ ಗ್ರಾಮಸ್ಥರು ಸೇರಿ ಆರತಿ ಮಾಡಿ ಬರಮಾಡಿಕೊಂಡಿದ್ದೆವೆ. ನಮ್ಮ ಊರಿನವರು ಎಂದು ಹೇಳಿಕೊಳ್ಳುವುದಕ್ಕೆ ತುಂಬಾ ಸಂತೋಷ ವಾಗುತ್ತದೆ ಮತ್ತು ನಮ್ಮ ಊರಿನಲ್ಲಿ ಎಲ್ಲರೂ ಸೇರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಯೋಧ ಮಹದೇವು ಮಾತನಾಡಿ ನಮಗೆ ತುಂಬಾ ಸಂತೋಷ ವಾಗಿದೆ. ನಮ್ಮ ಊರಿನ ಜನತೆ ಮತ್ತು ಅಕ್ಕ ಪಕ್ಕದ ಊರಿನ ಗ್ರಾಮಸ್ಥರು ನಮಗೆ ತೋರಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ಮುಂದೆ ಯುವಕರು ಸೇನೆ ಗೆ ಸೇರಿ ದೇಶ ಸೇವೆ ಮಾಡುವಂತೆ ಹೇಳಿದರು.