News Karnataka Kannada
Saturday, May 04 2024
ರಾಮನಗರ

ರಾಮನಗರ: ಮಳೆಗೆ ಕೊಚ್ಚಿಹೋದ ಬಿಡದಿ-ಬಾನಂದೂರು ರಸ್ತೆ

Ramanagara: Bidadi-Banandur road washed away due to rain
Photo Credit : By Author

ರಾಮನಗರ: ತಾಲ್ಲೂಕಿನ ಬಿಡದಿ ಸಮೀಪದ ನಲ್ಲಿಗುಡ್ಡೆ ಕೆರೆ ಕೋಡಿ ಹಳ್ಳದಲ್ಲಿ ಹರಿಯುತ್ತಿರುವ ಭಾರಿ ಪ್ರಮಾಣದ ನೀರಿನ ರಭಸಕ್ಕೆ ಬಿಡದಿ-ಬಾನಂದೂರು ಮುಖ್ಯರಸ್ತೆಯೇ ಕೊಚ್ಚಿ ಹೋಗಿದ್ದು ಇದರಿಂದ ಕೆಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಜನರು ವಾಹನಗಳಲ್ಲಿ ಬೇರೆ ಮಾರ್ಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಡದಿ ಸುತ್ತಮುತ್ತಲೂ ಸುರಿಯುತ್ತಿರುವ ಭಾರಿ ಮಳೆಯಿಂದ ನಲ್ಲಿಗುಡ್ಡೆ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಹೀಗಾಗಿ ಕೋಡಿ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಹೊರ ಹೋಗುತ್ತಿದ್ದು ಬಿಡದಿ-ಬಾನಂದೂರು ರಸ್ತೆಗೆ ಬಸವರಾಜು ಲೇಔಟ್ ಬಳಿ ಅಡ್ಡಲಾಗಿರುವ ಚೆಕ್ ಡ್ಯಾಂ ಮಾದರಿಯ ಸೇತುವೆ ಸಂಪೂರ್ಣ ಕೊಚ್ಚಿಹೋಗಿದೆ. ಕೋಡಿ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಬಾನಂದೂರು ಸೇರಿದಂತೆ ಕೆಲವು ಗ್ರಾಮಗಳು ಮುಖ್ಯರಸ್ತೆಯ ಸಂಪರ್ಕವನ್ನೇ ಕಳೆದುಕೊಂಡಿವೆ. ಜನರು ಪರ್‍ಯಾಯ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯ ಎದುರಾಗಿದೆ.

ಬಿಡದಿ-ಬಾನಂದೂರು ರಸ್ತೆಯಲ್ಲಿರುವ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂಗೆ ದಶಕಗಳೇ ಉರುಳಿದರೂ ಸಂಪರ್ಕ ಸೇತುವೆಯಿಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಬಿಡದಿ-ಬಾನಂದೂರು ರಸ್ತೆಯ ಚೆಕ್ ಡ್ಯಾಂ ಮಾದರಿಯ ಸೇತುವೆ ಮೇಲಿನ ಡಾಂಬರ್ ಕಿತ್ತುಹೋಗಿ ಹಾಳಾಗಿತ್ತು. ಬಾನಂದೂರು ಮಾರ್ಗವಾಗಿ ಇಟ್ಟಮಡು, ಗೋಪಹಳ್ಳಿ, ಕೊಳ್ಳಗನಹಳ್ಳಿ ಸೇರಿದಂತೆ ನಾನಾ ಗ್ರಾಮಗಳಿಗೆ ತೆರಳುವ ಮುಖ್ಯ ರಸ್ತೆ ಅಕ್ಷರಸಹ ಹದಗೆಟ್ಟಿತ್ತು. ಈ ಕುರಿತು ವಿಕ ಪತ್ರಿಕೆ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ೨೦೨೧ರ ಡಿಸೆಂಬರ್ ನಲ್ಲಿ ರಸ್ತೆಗೆ ಮತ್ತು ಚೆಕ್ ಡ್ಯಾಂಗೆ ತೇಪೆ ಕಾಮಗಾರಿ ಮಾಡಲಾಗಿತ್ತು.

ಆದರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ರಸ್ತೆ ಮಾತ್ರವಲ್ಲದೆ ಈ ಮಾರ್ಗದಲ್ಲಿರುವ ಸಂಪರ್ಕ ಸೇತುವೆಗಳು ಕೂಡ ಹಾಳಾಗಿವೆ. ಅಕಾಲಿಕ ಮಳೆಯಿಂದ ಕೆರೆ-ಕಟ್ಟೆಗಳು ಭರ್ತಿಯಾದ ಹಿನ್ನೆಲೆಯಲ್ಲಿ ದೊಡ್ಡ ಹಳ್ಳಗಳು, ಕಾಲುವೆಗಳು ಮೈ ತುಂಬಿ ಹರಿದ ಪರಿಣಾಮ ಚೆಕ್ ಡ್ಯಾಂ ರೀತಿಯ ಸೇತುವೆಗಳು ನಾಶವಾಗಿವೆ. ಸದರಿ ರಸ್ತೆಯಲ್ಲಿರುವ ಹಳ್ಳದ ಚೆಕ್ ಡ್ಯಾಂ ಅನ್ನು ಎತ್ತರಿಸಿ ಹೊಸ ಸೇತುವೆ ನಿರ್ಮಿಸುವಂತೆ ಈ ಭಾಗದ ಜನರು ಹಲವು ವರ್ಷಗಳಿಂದ ಇಟ್ಟಿರುವ ಬೇಡಿಕೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ನಲ್ಲಿಗುಡ್ಡೆ ಕೆರೆ ಕೋಡಿ ಹಳ್ಳಕ್ಕೆ ನಿರ್ಮಿಸಿರುವ ಚೆಕ್‌ಡ್ಯಾಂ ಈ ಮೊದಲೇ ಶಿಥಿಲಾವಸ್ಥೆಗೆ ತಲುಪಿತ್ತು. ಮಳೆಯಿಂದ ಎರಡು ದಿನಗಳ ಹಿಂದೆಯಷ್ಟೇ ಚೆಕ್ ಡ್ಯಾಂ ಮೇಲಿನ ಕಾಂಕ್ರಿಟ್ ಸಂಪೂರ್ಣ ಕಿತ್ತು ಹೋಗಿತ್ತು. ಈಗ ಚೆಕ್ ಡ್ಯಾಂ ಸೇತುವೆಯೇ ನೀರಿನ ರಭಸಕ್ಕೆ ಆಹುತಿಯಾಗಿದೆ. ನೀರಿನ ಹರಿವು ಅಪಾಯದ ಮಟ್ಟ ತಲುಪಿದ್ದು ಸದ್ಯ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಸದರಿ ರಸ್ತೆಯಲ್ಲಿ ಪ್ರತಿದಿನ ಸಾರಿಗೆ ಸಂಸ್ಥೆ ಬಸ್‌ಗಳು, ಶಾಲಾ ವಾಹನಗಳು ಸೇರಿದಂತೆ ನಾನಾ ಗ್ರಾಮಗಳಿಂದ ನೂರಾರು ವಾಹನಗಳು ಸಂಚರಿಸುತ್ತಿದ್ದವು.

ಇದೀಗ ಲೋಕೋಪಯೋಗಿ ಇಲಾಖೆ ವತಿಯಿಂದ ಎಚ್ಚರಿಕೆಯ ಬೋರ್ಡ್ ಹಾಕಲಾಗಿದ್ದು, ಸೇತುವೆ ದುರಸ್ತಿ ಕಾರ್ಯ ಅಥವಾ ಹೊಸ ಸೇತುವೆ ನಿರ್ಮಾಣ ಆಗುವವರೆಗೆ ಜನರು ಮತ್ತು ವಾಹನಗಳು ಬೇರೆ ಮಾರ್ಗದ ಮೂಲಕವೇ ಬಾನಂದೂರು ಮತ್ತಿತರ ಗ್ರಾಮಗಳಿಗೆ ಸಂಚರಿಸುವುದು ಅನಿವಾರ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು