ಚಿಕ್ಕಮಗಳೂರು: ಸಂವಿಧಾನ ಬದಲಾವಣೆಗೆ ಯಾರಿಗೂ ಅಧಿಕಾರವಿಲ್ಲ. ಯಾರು ಸಂವಿಧಾನ ಬದಲಿಸುವ ಬಗ್ಗೆ ಮಾತಾಡುತ್ತಾರೋ, ಅವರು ಕಾನೂನು ಬಾಹಿರ ಶಕ್ತಿಗಳು. ಇತ್ತೀಚೆಗೆ ಕೇಂದ್ರ ಸಚಿವನೋರ್ವ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ತಕ್ಕ ಉತ್ತರ ಕೊಡುವ ಶಕ್ತಿ ಇಲ್ಲಿನ ಜನರಿಗಿದೆ ಎಂದು ಮುಂಬೈನ ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ 15ನೇ ವರ್ಷದ ಸಂಭ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಎರಡು ದಿನಗಳ ಸಮ್ಮಿಲನ-ನೆನಪು ಸೌಹಾರ್ದ ಮಂಟಪ ಕಾರ್ಯಕ್ರಮಕ್ಕೆ ಮುಂಬೈನ ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಮಂಗಳೂರು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್.ಉಮರ್ ಮತ್ತು ಬೆಂಗಳೂರಿನ ಪ್ರೊ. ನರಗೆರೆ ರಮೇಶ್ ಗುರುವಾರ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.
ಪ್ರಖ್ಯಾತ ಕವಿ ಬರ್ಟೋಲ್ಟ್ ಬ್ರೆಕ್ಟ್ನ ಕವಿತೆಯ ಸಾಲುಗಳು ನೆನಪಾಗುತ್ತಿವೆ. ‘ಕಗ್ಗತ್ತಲ ಕಾಲದಲ್ಲಿ ಹಾಡುಗಳಿರುತ್ತವೆಯೇ ಎಂದು ಜನರು ಕೇಳುತ್ತಾರೆ. ಹೌದು, ಕಗ್ಗತ್ತಲ ಕಾಲದಲ್ಲಿಯೂ ಹಾಡುಗಳಿರುತ್ತವೆ. ಕಗ್ಗತ್ತಲ ಕಾಲದ ಬಗ್ಗೆ! ಎಂದು ಕವಿತೆಯ ಸಾಲುಗಳನ್ನು ಉದ್ಧರಿಸುತ್ತಾ ಅವರು ತಮ್ಮ ಮಾತುಗಳನ್ನು ಆರಂಭಿಸಿದರು. ಗುಜರಾತಿನಲ್ಲಿ ಹಿಂದುತ್ವದ ಮೂಲಕ ಜನರ ಭಾವನೆಗಳ ಮೇಲೆ ಚೆಲ್ಲಾಟ ನಡೆದಿದೆ. ಅದಕ್ಕೆ ಉತ್ತರವಾಗಿ ಹೋರಾಟದ ಮೂಲಕ ರೂಪುಗೊಂಡ ಜನನನಾಯಕ ಜಿಗ್ನೇಶ್ ಮೇವಾನಿ ಗೆಲುವು ಸಾಧಿಸಿದ್ದಾರೆ. ಇದು ಮುಂದಿನ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ. ಕರ್ನಾಟಕದ 25 ಕ್ಷೇತ್ರಗಳಲ್ಲಿ ಈ ರೀತಿಯ ಪ್ರಯೋಗ ನಡೆಯಬೇಕಾಗಿದೆ. ಹೊಸ ಆಲೋಚನೆ ಹೊಂದಿರುವ ಪ್ರತಿನಿಧಿಗಳು ಆಯ್ಕೆಯಾಗಿ ಬರಬೇಕು ಎಂದು ಆಶಿಸಿದರು.
15 ವರ್ಷದ ಸೌಹಾರ್ದ ಪ್ರಯಾಣದ ಚಿತ್ರಪ್ರದರ್ಶನವನ್ನು ಚಿಂತಕ ಜಿ.ರಾಜಶೇಖರ್, ಬೆಂಗಳೂರು ಕೋಮು ಸೌಹಾರ್ದ ವೇದಿಕೆಯ ಅಮ್ಜದ್ ಪಾಷಾ ಉದ್ಘಾಟಿಸಿದರು. ಈ ವೇಳೆ ಡಿ.ಎಸ್.ಶಿವಕುಮಾರ್ ಮತ್ತು ಜಬೀನಾ ಖಾನಂ ಕಾರ್ಯಕ್ರಮ ನಡೆಸಿಕೊಟ್ಟರು.