News Karnataka Kannada
Wednesday, May 08 2024
ಕರ್ನಾಟಕ

ರೈತರ ವಂಚಿಸಿದ ಅಧಿಕಾರಿ ವಿರುದ್ಧ ಪ್ರತಿಭಟನೆ

Photo Credit :

ರೈತರ ವಂಚಿಸಿದ ಅಧಿಕಾರಿ ವಿರುದ್ಧ ಪ್ರತಿಭಟನೆ

ಭಾರತೀನಗರ: ರೈತರನ್ನು ವಂಚಿಸಿ ಭಾರಿ ಭ್ರಷ್ಟಾಚಾರ ನಡೆಸಿರುವ ಸಿಇಓ ಗಿರಿಜಮ್ಮ ವಿರುದ್ದ ಕ್ರಮಕೈಗೊಂಡು ನ್ಯಾಯ ಒದಗಿಸದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲಾಗುವುದೆಂದು ಸಹಕಾರ ಸಂಘ ವ್ಯಾಪ್ತಿಯ ರೈತರು ಹಗ್ಗ ಹಿಡಿದು ಎಚ್ಚರಿಕೆ ನೀಡಿದರು.

ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಗ್ಗದೊಂದಿಗೆ ಜಮಾಯಿಸಿದ ರೈತರು, ಸಾಲ ವಿತರಣೆಯಲ್ಲಿ ಸಿಇಓ ಗಿರಿಜಮ್ಮ ಭಾರಿ ಅವ್ಯವಹಾರ ನಡೆಸಿ ರೈತರನ್ನು ವಂಚಿಸಿದ್ದಾರೆ. ಇದರಿಂದಾಗಿ ಸಾಲ ಪಡೆಯದ ರೈತರು ಸಾಲ ಮರುಪಾವತಿ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹೆಸರಿನ ಆರ್‍ ಟಿಸಿಯನ್ನು ಅಕ್ರಮವಾಗಿ ಪಡೆದು ಸಾಲಸೌಲಭ್ಯ ದೊರಕಿಸಿದ್ದೇನೆಂದು ನಕಲಿ ದಾಖಲೆಗಳನ್ನು ಸೃಷ್ಠಿಸಿದ ಗಿರಿಜಮ್ಮ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದಾಗಿ ರೈತರು ಸಾಲ ಪಡೆಯದಿದ್ದರೂ ಸಾಲ ಮರುಪಾವತಿಸುವಂತೆ ನೋಟಿಸ್ ಬಂದಾಗಲೇ ಸಾಲ ಪಡೆದು ಅಕ್ರಮವೆಸಗಿರುವುದು ತಿಳಿದು ಬಂದಿದೆ. ಇಂತಹ ಸ್ಥಿತಿಯಿಂದಾಗಿ ಹೊಸ ಸಾಲ ಪಡೆಯುವುದಾಗಲಿ ಅಥವಾ ಸರ್ಕಾರದ ಸಾಲಮನ್ನಾ ಯೋಜನೆಗೆ ಒಳಪಡುವುದಾಗಲಿ ಸಾಧ್ಯವಾಗುವುದಿಲ್ಲ. ಇಂತಹ ದುಸ್ಥಿತಿಗೆ ರೈತರನ್ನು ತಳ್ಳಿರುವ ಸಿಇಓ ಗಿರಿಜಮ್ಮ ಅವರ ವಿರುದ್ದ ಕಠಿಣಕ್ರಮಕೈಗೊಂಡು ಅವರ ಆಸ್ತಿಮುಟ್ಟುಗೋಲು ಹಾಕಿಕೊಂಡು ದುರುಪಯೋಗ ಮಾಡಿಕೊಂಡಿರುವ ರೈತರ ಹಣವನ್ನು ಹಿಂತಿರುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭ ರೈತ ಜಿ.ಎಂ.ಸುರೇಶ್ ಮಾತನಾಡಿ, ನಾವು ಸಾಲ ಪಡೆದಿರುವುದು ಒಂದಾದರೆ ನಮಗೆ ಗೊತ್ತಿಲ್ಲದ ರೀತಿಯಲ್ಲಿ ದಾಖಲೆಗಳನ್ನು ತಿರುಚಿ ಹಣ ಪಡೆದಿರುವುದು ಮತ್ತೊಂದು. ಈಗ ಅದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಅನ್ಯಾಯಗಳು ಬಹಳಷ್ಟು ಮಂದಿಗೆ ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮಕೈಗೊಳ್ಳದಿದ್ದಲ್ಲಿ ಸಹಕಾರ ಸಂಘದ ಮುಂದೆ ಸಾಮೂಹಿಕವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಜಿ.ಎಂ.ಸುರೇಶ್, ಎಂ.ಬಸವೇಗೌಡ, ಚಿಕ್ಕತಾಯಮ್ಮ, ಬೋರೇಗೌಡ, ಜಿ.ಎಲ್.ನಾಗರಾಜು, ಅಕ್ಕಿಪುಟ್ಟಮಾದೇಗೌಡ, ಬಸವೇಗೌಡ, ಭಾಗ್ಯಮ್ಮ, ಅಕ್ಕಿಪುಟ್ಟನ ಬೋರೇಗೌಡರ ಬಸವೇಗೌಡ, ಕಾಳಮ್ಮ, ಜಿ.ಎಚ್.ಪುಟ್ಟಸ್ವಾಮಿ, ಎಚ್ಚರಿಕೆ ನೀಡಿದರು.

ನಂತರ ಸ್ಥಳಕ್ಕಾಗಮಿಸಿದ ಸಹಕಾರ ಅಭಿವೃದ್ದಿ ಅಧಿಕಾರಿ ರವಿ, ಮೇಲ್ವಿಚಾರಕ ಕೃಷ್ಣೇಗೌಡ, ಸಂಘದ ಅಧ್ಯಕ್ಷ ಸೇಟುಸಿದ್ದೇಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸಭೆ ನಡೆಸಿ ಅನ್ಯಾಯವಾಗಿರುವ ರೈತರಿಗೆ ಶೀಘ್ರದಲ್ಲೇ ನ್ಯಾಯದೊರಕಿಸಿಕೊಡಲು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಒಪ್ಪದ ರೈತರು ಜಿಲ್ಲಾಧಿಕಾರಿಗಳು ಅಥವಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಧ್ಯೆ ಪ್ರವೇಶಿಸಿ ವಂಚನೆಯಾಗಿರುವ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಸಹಕಾರ ಸಂಘದ ಮುಂದೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡುಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು