ಮಡಿಕೇರಿ: ಚೆರಿಯಪರಂಬು ಗ್ರಾಮದ ಕಾವೇರಿ ನದಿದಡದಲ್ಲಿ ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ತಂದು ಬಿಸಾಡುತ್ತಿದ್ದವರ ವಿರುದ್ಧ ನಾಪೋಕ್ಲು ಗ್ರಾಮ ಪಂಚಾಯ್ತಿ ಕ್ರಮ ಕೈಗೊಂಡಿದ್ದು, ಐದು ಸಾವಿರ ರೂಪಾಯಿ ದಂಡ ವಿಧಿಸಿದೆ.
ಮಡಿಕೇರಿಯ ಹೋಂಸ್ಟೇ ಒಂದರ ತ್ಯಾಜ್ಯಗಳನ್ನು ದೊಡ್ಡ, ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಟಾಟಾ ಏಸ್ ವಾಹನದಲ್ಲಿ ನಾಪೋಕ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಪಂಚಾಯ್ತಿ ಕಸವಿಲೇವಾರಿ ಜಾಗದಲ್ಲಿ ತಂದು ಸುರಿಯಲಾಗುತ್ತಿತ್ತು. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಚೋಂದಕ್ಕಿ, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಹಾಗೂ ಪಂಚಾಯ್ತಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತ್ಯಾಜ್ಯವನ್ನು ತಂದು ಬೀಸಾಡುತ್ತಿದ್ದವರ ವಿರುದ್ದ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಸವನ್ನು ಪುನಃ ವಾಹನಕ್ಕೆ ತುಂಬಿಸಿ ವಾಪಾಸು ಕಳುಹಿಸುವುದರೊಂದಿಗೆ ಐದು ಸಾವಿರ ರೂಪಾಯಿಗಳ ದಂಡವನ್ನು ವಸೂಲಾತಿ ಮಾಡಿದ್ದಾರೆ. ಇದೇ ರೀತಿ ಕಳೆದೆರಡು ದಿನಗಳ ಹಿಂದೆ ಪಟ್ಟಣದ ಕೋಳಿ ಅಂಗಡಿಯೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರ ವಿರುದ್ದ ಎರಡು ಸಾವಿರ ರೂಪಾಯಿಗಳ ದಂಡವನ್ನು ವಸೂಲಾತಿ ಮಾಡುವ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವವರಿಗೆ ಗ್ರಾಮ ಪಂಚಾಯ್ತಿ ಆಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.