ಕಾಸರಗೋಡು: ಯುವಜನರಲ್ಲಿನ ನಿರಾಶಕ್ತಿ, ಕಾರ್ಮಿಕರ ಕೊರತೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಕೃಷಿಯಲ್ಲಿ ಹಿನ್ನಡೆಗೆ ಕಾರಣ ಎಂದು ಕೇರಳ ರಾಜ್ಯಪಾಲ ಟಿ. ಸದಾಶಿವಂ ಅಭಿಪ್ರಾಯಪಟ್ಟರು.
ಅವರು ಶನಿವಾರ ಕಾಸರಗೋಡು ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್ ಐ)ನಲ್ಲಿ ಉದ್ದಿಮೆದಾರರ ಸಂಗಮ ಮತ್ತು ಕೃಷಿ ಉಪಕರಣ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ಕೃಷಿಯು ಕುಂಠಿತವಾಗುತ್ತಿದೆ. ಒಂದೆಡೆ ಕಾರ್ಮಿಕರ ಕೊರತೆ, ಜೊತೆಗೆ ಕೃಷಿಗೆ ಬಳಸುವ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆ ಮೊದಲಾದ ಕಾರಣಗಳಿಂದ ಕೃಷಿಯಿಂದ ಹಿಂದೆ ಸರಿಯುವಂತಾಗಿದೆ ಎಂದರು.
ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರವು ಕೃಷಿ ಸಂಶೋಧಕರಿಗೆ ಹಾಗೂ ಸ್ವಾವಲಂಬಿದಾರರಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.
ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು, ಸಿಪಿಸಿಆರ್ ಐ ನಿರ್ದೇಶಕ ಡಾ. ಪಿ. ಚೌಡಪ್ಪ, ಡಾ. ರಾಜು ನಾರಾಯಣ ಸ್ವಾಮಿ, ಡಾ. ಕೆ. ಮುರಳೀಧರನ್ ಮೊದಲಾದವರು ಉಪಸ್ಥಿತರಿದ್ದರು.