ಕಾರವಾರ:ಕಡಲತೀರ ನಿರ್ವಹಣಾ ವಲಯ ಸಮಿತಿಯ (ಸಿ.ಆರ್.ಝಡ್), ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಯನ್ನು ಪಾಲನೆ ಮಾಡದೇ ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯ ಹಲವು ಭಾಗದಲ್ಲಿ ಮರಳುಗಾರಿಕೆ ಮಾಡಲಾಗಿದೆ ಎಂದು ಸ್ಥಳೀಯರೊಬ್ಬರು ಮರಳುಗಾರಿಕೆಗೆ ಅನುಮತಿ ಕಲ್ಪಿಸುವುದು ಬೇಡ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ತಿಳಿಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮರಳು ಸಮಸ್ಯೆ ಇದೆ ಎನ್ನುವ ದೂರಿದೆ. ಸಿ.ಆರ್.ಝಡ್ ರಾಜ್ಯ ಸಮಿತಿಯ ನಿರ್ದೇಶನವನ್ನು ಅನುಸರಿಸಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಸಿಆರ್ಝೆಡ್, ಕೇಂದ್ರೀಯ ಪರಿಸರ ಇಲಾಖೆ, ಅರಣ್ಯ ಸಚಿವಾಲಯದ ನಿರ್ದೇಶನ ಬಂದ ಬಳಿಕ ಕ್ರಮಕೈಗೊಳ್ಳಲಾಗುವುದು.
ಜಿಲ್ಲೆಯ ಕಾಳಿ ನದಿಯಲ್ಲಿ ಮರಳುಗಾರಿಕೆ ವಿಷಯದಲ್ಲಿ ಈಗಾಗಲೇ ಕಾಳಿ ಪ್ರದೇಶಗಳು ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಈ ಕಾರಣದಿಂದ ಅವಕಾಶ ನೀಡಲಾಗಿದ್ದಲ್ಲ. ಈ ನಡುವೆ ತಜ್ಞರ ವರದಿ ಪ್ರಕಾರ ಪ್ರವಾಹದಿಂದ ವ್ಯಾಪ್ತಿ ಪಸರಿಸಿದೆ ಎಂದು ವರದಿ ನೀಡಿದ್ದಾರೆ. ಈ ವರದಿಯನ್ನು ಎಂಓಎಫ್ಇಗೆ ಕಳುಹಿಸಲಾಗಿದೆ. ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡುವ ಸಾಧ್ಯತೆಯ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ತಜ್ಞರಿಂದ ಅಧ್ಯಯನ ಮಾಡಿಸಲಾಗಿದೆ.
ವರದಿಯನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ ಪರಿಶೀಲಿಸಲಿದೆ. ಕಾಳಿ ನದಿಯಿಂದ ಮರಳು ತೆಗೆಯದ ಕಾರಣ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ತಜ್ಞರಿಂದ ಅಧ್ಯಯನ ಮಾಡಿಸಲಾಗಿತ್ತು. ಸಚಿವಾಲಯದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ ಎಂದರು.