ಮಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್ಡಿ ರೇವಣ್ಣ ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ ಜೋರಾಗಿದೆ. ದೇಶದಿಂದ ದೇಶಕ್ಕೆ ಹಾರುತ್ತಿರುವ ಪ್ರಜ್ವಲ್ ರೇವಣ್ಣ ಹೆಡೆಮುರಿ ಕಟ್ಟಲು ಎಸ್ಐಟಿ ಬಲೆ ಸಿದ್ಧವಾಗಿದೆ.
ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಜ್ವಲ್ ಬಂಧನಕ್ಕೆ ಸದ್ಯ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಏರ್ಪೋರ್ಟ್ ಇಮಿಗ್ರೇಶನ್ ಬಳಿಯೇ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಂಗಳೂರು, ಕೊಚ್ಚಿ, ಗೋವಾ, ಬೆಂಗಳೂರಿನ ಯಾವುದೇ ಏರ್ಪೋರ್ಟ್ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ. ಬಳಿಕ ಸ್ಥಳೀಯ ಠಾಣೆಗೆ ಕರೆದೊಯ್ಯುವ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಂತರ ಪ್ರಜ್ವಲ್ರನ್ನು SIT ಅಧಿಕಾರಿಗಳು ಬೆಂಗಳೂರಿಗೆ ಕರೆತರಲಿದ್ದಾರೆ.
ಸದ್ಯ ಇಂದು ಮಂಗಳೂರು ಏರ್ಪೋರ್ಟ್ಗೆ ಒಟ್ಟು 4 ವಿಮಾನ ಆಗಮಿಸಿವೆ. ಅಬುದಾಬಿಯಿಂದ ಈಗಷ್ಟೇ ಒಂದು ವಿಮಾನ ಲ್ಯಾಂಡ್ ಆಗಿದೆ. ಬೆಳಗ್ಗೆ 7.55ಕ್ಕೆ ದುಬೈನಿಂದ ಎರಡನೇ ವಿಮಾನ, ಸಂಜೆ 4.35ಕ್ಕೆ ದುಬೈನಿಂದ ಮಂಗಳೂರಿಗೆ 3ನೇ ವಿಮಾನ ಮತ್ತು ಸಂಜೆ 6.15ಕ್ಕೆ ಮಂಗಳೂರಿಗೆ ನಾಲ್ಕನೇ ವಿಮಾನ ಆಗಮಿಸಲಿವೆ.