ತಿ.ನರಸೀಪುರ: ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಿ.ಪಂ.ಸದಸ್ಯ ಎಂ.ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ನೀಡಿರುವ ಬೆನ್ನಲ್ಲೇ ಕ್ಷೇತ್ರದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಅವರು ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು ಅವರಿಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಸಂಬಂಧ ಆಕ್ರೋಶಗೊಂಡ ಕಾರ್ಯಕರ್ತರು ತಾಲ್ಲೂಕಿನ ಸೋಸಲೆ ಹೋಬಳಿ ವ್ಯಾಸರಾಜಪುರ ಗ್ರಾಮದಲ್ಲಿ ರಸ್ತೆ ತಡೆ ಮಾಡಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಟಿಕೆಟ್ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಜೆಡಿಎಸ್ ನ ಯುವ ಮುಖಂಡ ಸಂದೀಪ್ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಗೆಲ್ಲುವ ಕ್ಷೇತ್ರವಾಗಿರುವ ಮೀಸಲು ಕ್ಷೇತ್ರವನ್ನು ಸೋಲುವ ಕಡೆ ಮುಖ ಮಾಡುವಂತೆ ರಾಜ್ಯದ ಮುಖಂಡರು ಮಾಡುತ್ತಿದ್ದಾರೆ. 2016ರ ಜಿಲ್ಲಾ ಪಂಚಾಯಿತಿಯ ಚುನಾವಣೆಯ ಮುಖಾಂತರ ಸಾರ್ವಜನಿಕ ಜೀವನಕ್ಕೆ ಬಂದ ಎಂ.ಅಶ್ವಿನ್ ಕುಮಾರ್ ಅವರು ಅನುಭವಿಯಾಗಿದ್ದು, ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಇವರಿಗೆ ಸದರಿ ಕ್ಷೇತ್ರದಲ್ಲಿ ಇನ್ನು ಹತ್ತು ಮಂದಿ ಪ್ರಬಲ ಆಕಾಂಕ್ಷಿಗಳಿದ್ದು, ಇವರಲ್ಲಿ ಯಾರನ್ನೂ ಆಯ್ಕೆ ಮಾಡದೆ ಡಾ. ಎಚ್.ಸಿ.ಮಹದೇವಪ್ಪರ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಪ್ರತಿಸ್ಪರ್ಧಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ಪಕ್ಷದ ಸುನೀಲ್ ಬೋಸ್ ಅವರೊಂದಿಗೆ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಗುಪ್ತ ಸ್ಥಳದಲ್ಲಿ ಚರ್ಚಿಸುತ್ತಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಕಾರ್ಯಕರ್ತರ ಆಕ್ರೋಶವನ್ನು ಇನ್ನಷ್ಟು ಜಾಸ್ತಿ ಮಾಡಿದೆ.
ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದ್ದ ವೇಳೆಯಲ್ಲೇ ಅಶ್ವಿನ್ ಕುಮಾರ್ ವರಿಷ್ಠರ ಕೈಕಾಲು ಹಿಡಿದು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಅವರ ವಿರುದ್ಧವೇ ಆರೋಪ ಮತ್ತು ಅಸಮಾಧಾನ ಕಂಡು ಬರುತ್ತಿರುವುದರಿಂದ ತಿ.ನರಸೀರಪುರದಲ್ಲಿ ಜೆಡಿಎಸ್ ಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ