ಮಡಿಕೇರಿ: ಶಾಲೆ ಆರಂಭವಾಗಿ ತಿಂಗಳೇ ಕಳೆದರೂ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆಯಾಗದಿರುವುದರಿಂದ ಪರದಾಡುವಂತಾಗಿದೆ. ಇಷ್ಟರಲ್ಲೇ ಪಾಠಪ್ರವಚನಗಳು ಆರಂಭವಾಗಿವೆ. ಆದರೆ ಕೊಡಗಿನ ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆಯಾಗಿಲ್ಲ.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಇನ್ನೂ ಕೂಡ ಬಂದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಶಾಲೆಗಳ ಶಾಲಾ ಶಿಕ್ಷಕರೇ ಆಗಮಿಸಿ ಜಿಲ್ಲಾ ಕೇಂದ್ರದಿಂದ ಪಠ್ಯಪುಸ್ತಕವನ್ನು ತಮ್ಮ ಶಾಲೆಗಳಿಗೆ ಕೊಂಡೊಯ್ಯಬೇಕಿದೆ. ಆಗಾಗ್ಗೆ ಬರುತ್ತಿದ್ದರೂ ಎಲ್ಲ ವಿಷಯಗಳ ಪುಸ್ತಕಗಳು ದೊರೆಯದೆ ಹಿಂತಿರುಗುವಂತಾಗಿದೆ.
ಶಾಲೆ ಪ್ರಾರಂಭವಾದಲ್ಲಿಂದ ಇದುವರೆಗೆ ಪಠ್ಯಪುಸ್ತಕ ವಿತರಣೆಯಾಗದೆ ಪ್ರತೀ ಶಾಲೆಯಿಂದ ಒಂದೆರಡು ಶಿಕ್ಷಕರು ತಮ್ಮ ಪಾಠ ಪ್ರವಚಗಳನ್ನು ಬಿಟ್ಟು ಎರಡು ಮೂರು ಬಾರಿ ಇಲಾಖೆಯ ಪುಸ್ತಕ ವಿತರಣಾ ಕೇಂದ್ರಕ್ಕೆ ಅಲೆದು ಪುಸ್ತಕಕ್ಕೆ ಕಾದು ಕುಳಿತು ಹಿಂತಿರುಗುತ್ತಿದ್ದು, ಜೊತೆಗೆ ಅದರ ಖರ್ಚನ್ನು ಅವರೇ ಭರಿಸಬೇಕಿದೆ ಎಂಬುದು ಶಿಕ್ಷಕರ ಅಳಲಾಗಿದೆ.
ಈಗಾಗಲೇ ಒಂದೆರಡು ಅಧ್ಯಾಯಗಳು ಮುಗಿಯಬೇಕಿತ್ತು. ಆದರೆ ಪುಸ್ತಕವೇ ಸಿಗದ ಕಾರಣ ಪಾಠ ಮಾಡುತ್ತಿದ್ದರೂ ಮಕ್ಕಳಿಗೆ ಕಲಿಯಲು ತೊಂದರೆಯಾಗುತ್ತಿದೆ. ಪ್ರೌಢಶಾಲೆಗಳ ಎಂಟನೇ ತರಗತಿಯ ಗಣಿತ, ಒಂಭತ್ತನೇ ತರಗತಿಯ ಗಣಿತ ಭಾಗ2, ಸಮಾಜ ಭಾಗ2, ದೈಹಿಕ ಶಿಕ್ಷಣ ಹಾಗೂ ಹತ್ತನೇ ತರಗತಿಯ ಗಣಿತ ಭಾಗ2 ಪುಸ್ತಕಗಳು ಇನ್ನು ವಿತರಣೆಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಗ್ರಾಮೀಣ ಪ್ರದೇಶಗಳಿಂದ ಪುಸ್ತಕ ಪಡೆದುಕೊಳ್ಳಲು ಶಿಕ್ಷಕರು ಬರುವುದರಿಂದ ಮಕ್ಕಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಮಕ್ಕಳಿಗೆ ಅಗತ್ಯ ಪಠ್ಯಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕಿದೆ.