ಮೂಡಿಗೆರೆ: ಸರ್ಕಾರಿ ಶಾಲೆಯೊಂದರ ನಲಿಕಲಿ ಕೊಠಡಿಯಲ್ಲಿ ನಾಗರ ಹಾವೊಂದು ಸೇರಿಕೊಂಡಿದ್ದು, ಶಾಲಾ ಬಾಲಕಿಯೊಬ್ಬಳ ಸಮಯಪ್ರಜ್ಞೆಯಿಂದ ನಡೆಯಬೇಕಿದ್ದ ಅನಾಹುತವೊಂದು ತಪ್ಪಿದಂತಾಗಿದೆ.
ಕಿರುಗುಂದ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಮನೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ-ಪ್ರವಚನ ನಡೆಯುತ್ತಿದ್ದ ವೇಳೆ ನಲಿಕಲಿ ಕೊಠಡಿಗೆ ಮಾ.30ರಂದು ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ಸುಣ್ಣಬಣ್ಣ ಬಳಿಯುವ ಸಲುವಾಗಿ ಆ ಕೊಠಡಿಯಲ್ಲಿದ್ದ ಮಕ್ಕಳನ್ನು ಬುಧವಾರ ಬೇರೆ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಿಕೊಡಲಾಗಿತ್ತು.
ಮಧ್ಯಾಹ್ನ 12.30ರ ವೇಳೆ 6ನೇ ತರಗತಿ ಬಾಲಕಿಯೊಬ್ಬಳು ಖಾಲಿಯಾಗಿದ್ದ ನಲಿಕಲಿ ಕೊಠಡಿಗೆ ಕಾರ್ಡ್ ತರಲು ತೆರಳಿದ್ದಾಳೆ. ಈ ವೇಳೆ ದೊಡ್ಡ ಗಾತ್ರದ ನಾಗರಹಾವೊಂದು ಕೊಠಡಿಯಲ್ಲಿಟ್ಟಿದ್ದ ಬಾಕ್ಸ್ ನಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಬಾಲಕಿಯು ಶಿಕ್ಷಕಿ ನಾಗರತ್ನ ಮತ್ತು ಸಿ.ಆರ್.ಪಿ.ಕಿರಣ್ ಕುಮಾರ್ ಗೆ ತಿಳಿಸಿದ್ದಾಳೆ. ನಂತರ ಜನ್ನಾಪುರದ ಸ್ನೇಕ್ ಮಹೇಶ್ ಎಂಬುವವರನ್ನು ಶಾಲೆಗೆ ಕರೆಸಿದ್ದು ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 32 ಮಕ್ಕಳಿದ್ದು, ನಲಿಕಲಿ ಕೊಠಡಿಯಲ್ಲಿ 1ರಿಂದ 3ನೇ ತರಗತಿಯ 15 ಮಕ್ಕಳನ್ನು ಕೂರಿಸಲಾಗುತ್ತಿತ್ತು. ಬಣ್ಣ ಬಳಿಯುವ ಸಲುವಾಗಿ ಬೇರೆ ಕೊಠಡಿಗೆ ಮಕ್ಕಳನ್ನು ಕರೆದೊಯ್ಯದಿದ್ದರೆ ಅನಾಹುತ ಸಂಭವಿಸುತ್ತಿತ್ತು.
ಶಾಲೆಯ ಬಾಗಿಲಿನ ಬಳಿ ಇರುವ ರಂಧ್ರದಿಂದ ರಾತ್ರಿವೇಳೆ ಈ ನಾಗರಹಾವು ಒಳನುಸುಳಿ ಪೆಟ್ಟಿಗೆಯೊಳಗೆ ಸೇರಿಕೊಂಡಿರಬಹುದು ಎಂದು ಮುಖ್ಯಶಿಕ್ಷಕಿ ನಾಗರತ್ನ ಮತ್ತು ಸಿ.ಆರ್.ಪಿ. ಕಿರಣ್ ಕುಮಾರ್ ಮಾಹಿತಿ ನೀಡಿದ್ದಾರೆ.