ಚಾಮರಾಜನಗರ: ಗಡಿಭಾಗವಾದ ತಾಳವಾಡಿಯ ಗುಮಟಾಪುರದಲ್ಲಿ ದೀಪಾವಳಿಯ ಮಾರನೆಯ ದಿನವನ್ನು ಗೊರೆಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರು ಸಂಭ್ರಮಿಸಿದರು.
ಒಬ್ಬರ ಮೇಲೆ ಒಬ್ಬರು ಸೆಗಣಿಯಲ್ಲಿ ಬಡಿದಾಡಿಕೊಳ್ಳುತ್ತಾ ದೀಪಾವಳಿಯನ್ನು ಬೀಳ್ಕೊಟ್ಟರು. ಗಡಿಭಾಗವಾದ ಗುಮಟಾಪುರ ತಮಿಳುನಾಡಿನಲ್ಲಿದ್ದರೂ ಹೆಚಿನವರು ಕನ್ನಡಿಗರು. ಇಲ್ಲಿ ಸೆಗಣಿಯಲ್ಲಿ ಬಡಿದಾಡಿಕೊಳ್ಳುವ ಗೊರೆಹಬ್ಬ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ದೀಪಾವಳಿಯ ಮಾರನೆಯ ದಿನ ಈ ಹಬ್ಬವನ್ನು ಗ್ರಾಮದಲ್ಲಿ ಆಚರಿಸುತ್ತಾರೆ.
ಮತ್ತೊಂದು ವಿಶೇಷತೆ ಏನೆಂದರೆ ದೀಪಾವಳಿದಿನದಂದು ಇಲ್ಲಿ ಪಟಾಕಿ ಹೊಡೆಯುವುದಿಲ್ಲ, ಬದಲಾಗಿ ಮರುದಿನ ಇಲ್ಲಿ ಗೊರೆ ಹಬ್ಬ ಆಚರಣೆ ಮಾಡಿ ನಂತರ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಗ್ರಾಮದಲ್ಲಿ ಎಲ್ಲರ ಮನೆಯಲ್ಲಿನ ಸಗಣಿಯನ್ನು ಎತ್ತಿನಗಾಡಿ, ಟ್ರ್ಯಾಕ್ಟರ್ ಮೂಲಕ ಸಂಗ್ರಹಣೆ ಮಾಡಿದ ಗ್ರಾಮಸ್ಥರು ಗ್ರಾಮದ ದೇವಾಲಯ ಹಿಂಭಾಗ ಸುರಿದು ರಾಶಿ ಮಾಡಿ ಬೆಟ್ಟದಂತೆ ಮಾಡಿ, ದೇವಾಲಯದಿಂದ ಅರ್ಚಕರು ಬಂದು ತೀರ್ಥ ಪ್ರೋಕ್ಷಣೆ ಮಾಡಿದ ಬಳಿಕ ಅವರ ಮೇಲೆ ದೇವರು ಬಂದು ಗೊರೆಯಲ್ಲಿ ಹೊಡೆದಾಡಲು ಆದೇಶ ನೀಡುತ್ತಾರೆ.
ತದನಂತರ ಗೊರೆಯ ರಾಶಿಯಲ್ಲಿದ್ದವರು ಭಾರಿ ಉಂಡೆಗಳನ್ನು ಮಾಡಿಕೊಂಡು ಪರಸ್ಪರ ಹೊಡೆದಾಟ ಮಾಡಿಕೊಂಡು ಸಂತೋಷ ಪಡುತ್ತಾರೆ. ಇದಕ್ಕೂ ಮೊದಲು ಗುಮ್ಮಟಾಪುರ ಬಳಿ ಇರುವ ಪಾಳು ಬಿದ್ದ ದೇವಾಲಯದಿಂದ ಗ್ರಾಮದ ಯುವಕರು ಮೈಗೆ ಅಂಬಿನ್ನು ಕಟ್ಟಿಕೊಂಡು, ಯುವಕನೊಬ್ಬನಿಗೆ ಚಾಡಿಕೋರನ ವೇಷ ಧರಿಸಿ ಮೆರವಣಿಗೆ ಮಾಡಿ ಗ್ರಾಮದ ಕೆರೆಯಲ್ಲಿ ಸ್ನಾನ ಮಾಡಿಸಿ ಕತ್ತೆಯ ಮೇಲೆ ಕುಳ್ಳರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮೆರವಣಿಗೆಯಲ್ಲಿ ಕರೆ ತರುತ್ತಾರೆ. ಈ ವೇಳೆಯಲ್ಲಿ ಇಡೀ ಗ್ರಾಮದವರು ತಮ್ಮ ಮನಸ್ಸಿನಲ್ಲಿರುವ ಕೋಪವನ್ನೆಲ್ಲ ಬೈಯ್ಗುಳ ಮೂಲಕ ಹೊರ ಹಾಕುತ್ತಾರೆ. ಹೀಗೆ ಅಶ್ಲೀಲ ಪದಗಳಿಂದ ಬಹಿರಂಗವಾಗಿ ಬೈಯ್ಯುತ್ತಾ ಸಾಗುತ್ತಾರೆ.
ಗೊರೆಯಲ್ಲಿ ಹೊಡೆದಾಟ ಮಾಡಿದ ಬಳಿಕ, ಗ್ರಾಮದ ಬೀರೇಶ್ವರ ಸ್ವಾಮಿ ದರ್ಶನ ಮಾಡಿದ ಗ್ರಾಮಸ್ಥರು, ಗ್ರಾಮದ ಅಂಚಿನಲ್ಲಿರುವ ಕೊಂಡಕೋರನ ಗುಡ್ಡದಲ್ಲಿ ಚಾಡಿಕೋರನ ಪ್ರತಿಕೃತಿ ದಹಿಸುವ ಮೂಲಕ ರಾತ್ರಿ ಗೊರೆ ಹಬ್ಬಕ್ಕೆ ತೆರೆ ಎಳೆದರು.