ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೀಮಲ್ ಚಂಡಮಾರುತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಿಗೆ ಅಪ್ಪಳಿಸಿರುವ ರಣಚಂಡಿ ಮಾರುತ 16 ಜನರನ್ನು ಬಲಿ ಪಡೆದಿದೆ.
ಹವಾಮಾನ ಇಲಾಖೆ ಪ್ರಕಾರ ಚಂಡಮಾರುತ ಈಶಾನ್ಯ ರಾಜ್ಯಗಳನ್ನ ಹಾದು ಸೈಕ್ಲೋನ್ ಹೋಗಲಿದೆ. ಹೀಗಾಗಿ ಮುಂದಿನ 24 ಗಂಟೆಯಲ್ಲಿ ಅಸ್ಸಾಂನ 11 ಜಿಲ್ಲೆಗಳು ಸೇರಿದಂತೆ ಈಶಾನ್ಯದ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಬಿರುಗಾಳಿ ಮಳೆ ಅಬ್ಬರಕ್ಕೆ ಉತ್ತರ 24 ಪರಗಣ, ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಹಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ. ಬಂಗಾಳ ಕರಾವಳಿ ತೀರದ 29 ಸಾವಿರದ 500ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದೆ. 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 2,100ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕೋಲ್ಕತ್ತಾದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯವಸ್ತಗೊಂಡಿದೆ. ಕೆಲವು ಕಡೆ ದೂರವಾಣಿ ಸಂಪರ್ಕ ಕಡಿತಗೊಂಡಿದೆ.
ರೆಮಲ್ ಅಪಾಯದ ಹಿನ್ನೆಲೆಯಲ್ಲಿ ಸಮುದ್ರ ತೀರದ ಪ್ರದೇಶಗಳ 2.80 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳ ಜನರಿಗೆ ತುರ್ತಾಗಿ ಆರ್ಥಿಕ ನೆರವು ನೀಡಲಾಗ್ತಿದೆ.
ಚಂಡಮಾರುತದ ಅಬ್ಬರಕ್ಕೆ ಅಗರ್ತಲಾ ವಿಮಾನ ನಿಲ್ದಾಣದಿಂದ 11 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸುಮಾರು 42 ಟ್ರೈನ್ಗಳ ಪ್ರಯಾಣ ಕ್ಯಾನ್ಸಲ್ ಮಾಡಲಾಗಿದೆ.